Tuesday, March 31, 2009

ಹೃದ್ರೋಗಿಗಳು ಕಡಿಮೆಯಾಗುತ್ತಾರೆ



ಮಯೂರ ಕೇಳಿದ ಪ್ರಶ್ನೆಗಳು: 
  • ಬರಹಗಾರರು ನಗುವುದನ್ನು ಮರೆತಿದ್ದಾರೆಯೇ? ಅಥವಾ ಅವರು ನಗಬಾರದೇ? 
  • ಎಲ್ಲ ಸಾಹಿತ್ಯ  ಕೃತಿಗಳಲ್ಲೂ ಹಿತ್ತಲಿನಿಂದ ಹಿಮಾಲಯದವರೆಗೆ ಸಮಸ್ಯೆ ಸಮಸ್ಯೆ. ಜೀವನದ ಸಣ್ಣಪುಟ್ಟ ಖುಷಿ ಯಾಕೆ ಮುಖ್ಯವೆನ್ನಿಸುತ್ತಿಲ್ಲ?
  • ಸಾಹಿತಿಗಳು ಒಂದಾದರೂ ನಗೆ ಕೃತಿ ಬರೆಯಲೇಬೇಕು ಎಂದು ಕಡ್ಡಾಯ ಮಾಡಿದರೆ ಹೇಗೆ?
  • ನೆನಪಿಸಿಕೊಂಡಾಗೆಲ್ಲಾ ನಗುವಂಥಹ ನೀವು ಓದಿದ ಬರಹ?

ಉತ್ತರ:

ಬರಹಗಾರರು ನಗುವುದನ್ನ ಮರೆತಿಲ್ಲ. ಅವರು ಬರೆದ ಘನಘಂಭೀರ ಕೃತಿಗಳನ್ನು ವಿಮರ್ಶಕರು ಕುಯ್ದುಕುಯ್ದು ಒಳಗೆ ಅರ್ಥವನ್ನು ಹುಡುಕುವುದನ್ನು ನೋಡಿ ಅದನ್ನು ಅರ್ಥೈಸುವ ರೀತಿಯನ್ನ ನೋಡಿ, 
ವಿಮರ್ಶಕರ ಪದಪ್ರಯೋಗವನ್ನು ನೋಡಿ ನಗುತ್ತಲೇ ಇದ್ದಾರೆ. 

ಹೀಗೆ ಹೇಳಿದಾಗ ಬರಹಗಾರರಿಗೂ ವಿಮರ್ಶಕರಿಗೂ ವ್ಯತ್ಯಾಸವಿದೆ ಅನ್ನುವುದನ್ನು ನಾವು ಗಮನಿಸಬೇಕು. ಕವಿ, ಕಥೆಗಾರ, ನಾಟಕಕಾರರನ್ನು ಜನ ಬರಹಗಾರರೆಂದು ಗುರುತಿಸುತ್ತಲೇ ವಿಮರ್ಶಕರನ್ನು ಬೇರೆಯಾಗಿ ಇಟುಬಟ್ಟಿದ್ದಾರೆ! ಆದರೆ ಘಂಭೀರ ಕೃತಿಗಳಲ್ಲೂ ಹಾಸ್ಯವನ್ನು ಹುಡುಕುವುದು, ಖುಷಿಯನ್ನು ಹುಡುಕುವ ಜವಾಬ್ದಾರಿ ಇರುವುದು ಓದುಗನ ಮೇಲೆ ಅವಲಂಬಿತವಾಗಿದೆ. ಓದುಗನೇ ಆ ಕೃತಿಯನ್ನು ಘಂಭೀರವಾಗಿ ಸ್ವೀಕರಿಸಿದರೆ ಅದು ಬರಹಗಾರನ ತಪ್ಪೇ? 

ಎಲ್ಲ ಸಾಹಿತ್ಯ ಕೃತಿಗಳಲ್ಲೂ ಸಮಸ್ಯೆಗಳೇ ಅಂತ ನೀವಂದಿದ್ದೀರಿ. ಈ ಸಮಸ್ಯೆಗಳಿಂದ ಪಲಾಯನಮಾಡಲು ಈ ಟೀವಿಯವರು ನಿಮ್ಮನ್ನು ನಗಿಸಲು ಕಾಮೆಡಿ ಕಿಲಾಡಿಗಳು ಅನ್ನುವ ಕಾರ್ಯಕ್ರಮವನ್ನು ರೂಪಿಸಿದರು. ಅದನ್ನು ನೋಡಿದರೆ ಈ ಕಾರ್ಯಕ್ರಮವೇ ಒಂದು ಸಮಸ್ಯೆ ಅನ್ನುವುದು ನಿಮಗೆ ವೇದ್ಯವಾಗುತ್ತದೆ. ಹೀಗಾಗಿ ಒಮ್ಮೊಮ್ಮೆ ಪರಿಹಾರಕ್ಕಿಂತ ಸಮಸ್ಯೆಯ ಜೊತೆ ಜೀವನ ಮಾಡುವುದೇ ಒಳ್ಳೆಯದೇನೋ. 

ನಮ್ಮ ಲೇಖಕರು ತಮ್ಮ ಸಮಸ್ಯೆಗಳನ್ನು ಬರಹರೂಪಕ್ಕಿಳಿಸಿ ಹೃದಯದಿಂದ ಹೊರಹಾಕುವುದು ಒಂದು ಥರ ಒಳ್ಳೆಯದಲವೇ? ಹೀಗೆ ಹೃದ್ರೋಗಿಗಳ ಸಂಖ್ಯೆಯಾದರೂ ಕಡಿಮೆಯಾಗುತ್ತದೆ. ಅಕಸ್ಮಾತ್ ಬರಹಗಾರರು ಕಡ್ಡಾಯವಾಗಿ ಹಾಸ್ಯ ಬರೆದರೆ, ಕಾಮೆಡಿ ಕಿಲಾಡಿಗಳ ಗತಿಯೇನು?

ವ್ಯಾಲೆಂಟೈನ್ಸ್ ಡೇ ಆಚರಿಸಬಾರದೆಂದು ಕೂಗಾಡುವ ಮುತಾಲಿಕ್‍ ನಿಮಗೆ ಸಮಸ್ಯೆಯಾಗಿ ಕಾಣುತ್ತಾರೆಯೇ? ಸ್ವಲ್ಪ ಯೋಚಿಸಿ ನೋಡಿ, ಮದುವೆ ಮಾಡಿಕೊಳ್ಳದಿರುವ ಆತ ತನ್ನ ಮೇಲೆ ಇಲ್ಲದ ಜವಾಬ್ದಾರಿಯನ್ನು ಹೇರಿಕೊಂಡು ಅದನ್ನು ತನ್ನ ಸೇನೆಯ ಮೂಲಕ ಪರಿಹರಿಸುತ್ತೇನೆಂದು ಹೊರಟಿರುವುದರಲ್ಲಿ ನಿಮಗೆ ಹಾಸ್ಯ ಕಾಣುವುದಿಲ್ಲವೇ? ಆತನಿಗೆ ಪಿಂಕ್ ಚೆಡ್ಡಿ ಕಳಿಸುವ ಹೆಂಗಸರು ನಿಮಗೆ ಮಂದಹಾಸ ನೀಡಲಿಲ್ಲವೇ?

ಮುತಾಲಿಕ್‍ಗೆ ಮದುವೆ ಮಾಡಿಸುತ್ತೇನೆಂದು ಹೊರಟಿರುವ ವಾಟಾಳ್ ಕಂಡರೆ ನಮಗೆ ನಗು ಬರುವುದಿಲ್ಲವಾ?

ರೋಜಾ ಹೂವು ವ್ಯಾಪಾರ ಹೆಚ್ಚುತ್ತದಾದ್ದರಿಂದ ವ್ಯಾಲೆಂಟೈನ್ಸ್ ಡೇ ಸಮರ್ಥಿಸುತ್ತೇವೆನ್ನುವ ರೈತ ಸಂಘದವರ ವಕ್ತವ್ಯದಲ್ಲಿ ನಗೆಯಿಲ್ಲವೇ?

ಹೀಗಾಗಿ ತಪ್ಪಿರುವುದು ಬರಹಗಾರರಲ್ಲಲ್ಲ. ಅದರಲ್ಲಿ ಹಾಸ್ಯ ಕಾಣದ, ಅದನ್ನು ನೋಡಿ ನಗಲಾರದ ಓದುಗರಲ್ಲಿ, ವಿಮರ್ಶಕರಲ್ಲಿ.

ನನ ಓದಿನ ಬಗ್ಗೆ: ನೆನಪಿಸಿಕೊಂಡಾಗಲೆಲ್ಲ ನಗುವಂಥ ಕಥೆ ಯಶವಂತ ಚಿತ್ತಾಲರ ಕಳ್ಳ ಗಿರಿಯಣ್ಣ, ಜಯಂತ ಕಾಯ್ಕಿಣಿಯ ದಗಡೂ ಪರಬನ ಅಶ್ವಮೇಧ; ಬೇಂದ್ರೆ ಬರೆದ ತಮ್ಮದೇ ಅಣಕವಾಡು - ಬೆಕ್ಕು ಹಾರುತಿದೆ ನೋಡಿದಿರಾ; ವೈನ್‍ಕೆ ಅವರ ವಂಡರ್ ಪುಸ್ತಕಗಳು, ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ [ಕವಿ-ತೆಗಳು], ತೀರ್ಥರೂಪ [ಅಥವಾ ಮಧ್ಯ ಇಷ್ಟು ಟೈಟ್ ಆದ್ರೆಹೇಗೆ ಸ್ವಾಮಿ]; ಡುಂಡಿರಾಜರ ಹನಿಗಳು; ವಿಜಿಭಟ್ಟರ ಕವಿತೆಗಳು; ಕೆವಿ ತಿರುಮಲೇಶರ ತರಂಗಾಂತರ ಅನ್ನುವ ಗಂಭೀರ ಕಿರುಕಾದಂಬರಿಯ ಭಾಗಗಳು, ವಿರೇಚನ ಅನ್ನುವ ಕಥೆ, ಮತ್ತು ಅವರದೇ ಅವಧ ಕವಿತಾಗುಚ್ಛ. ನೆನಪಿಸಿಕೊಳ್ಳದಿದ್ದರೂ ನಗು ತರಿಸುವ ಪುಸ್ತಕ ಮೊಗಳ್ಳಿ ಗಣೇಶರ ತಕರಾರು.


  

No comments:

Post a Comment