Monday, September 7, 2009

ಸೆಪ್ಟೆಂಬರ್ ೫ ರ ವಿಚಾರಗಳು

"When I was a boy of 14, my father
was so ignorant I could hardly stand to
have the old man around. But when
I got to be 21, I was astonished at how
much the old man had learned in
seven years."
Mark Twain


ಸುಮಾರು ಹದಿನೈದು ವರ್ಷಕಾಲ ಮೇಷ್ಟರ ಕೆಲಸ ಮಾಡಿದಾಗ ಸಹಜವಾಗಿಯೇ ಒಂದು ಸೀನಿಯಾರಿಟಿ ಬಂದುಬಿಡುತ್ತದೆ. ಜೊತೆಗೆ "ನಾನು ಮೇಷ್ಟರ ಕೆಲಸ ಪ್ರಾರಂಭಮಾಡಿದಾಗ ವಿದ್ಯಾರ್ಥಿಗಳು ಎಷ್ಟು ಮರ್ಯಾದೆಯಿಂದ ಇದ್ದರು.. ಈಗ ಕಾಲ ಬದಲಾಗಿದೆ" ಎಂದು ಕರುಬುವ ಪರಿಸ್ಥಿತಿ ಉಂಟಾಗಿದ್ದರೆ ಆ ಮೇಷ್ಟರಿಗೆ ಮಧ್ಯವಯಸ್ಸು ದಾಟುತ್ತಿದೆ ಅನ್ನುವುದು ಖಾತರಿ. ಆದ್ದರಿಂದಲೇ ವಿದ್ಯಾರ್ಥಿಗಳಿಗೂ ಅವರ ಗುರುಗಳಿಗೂ ಇರುವ ಸಂಬಂಧ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಅನ್ನುವುದು ಎಷ್ಟು ನಿಜವೋ ವ್ಯಕ್ತಿಯ ಸಮಯ, ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ ಅನ್ನುವುದೂ ಅಷ್ಟೇ ನಿಜ. ಆದರೂ ನಾವುಗಳು "ಇಂದಿನ ವಿದ್ಯಾರ್ಥಿಗಳೇ ಬೇರೆ" ಎಂದು ಕರುಬುವುದನ್ನು ನಮ್ಮ ಭವ್ಯ ಚರಿತ್ರೆಯಲ್ಲಿ ಬದುಕುವುದನ್ನೂ ಬಿಡುವುದಿಲ್ಲ.

ಕಳೆದ ಹದಿನೈದು ವರ್ಷಗಳನ್ನು ತೆಗೆದು ಉನ್ನತ ವಿದ್ಯಾ ಸಂಸ್ಥೆಗಳಾದ ಇರ್ಮಾ ಅಥವಾ ಐಐಎಂಗಳಲ್ಲಿ ಗುರು-ಶಿಷ್ಯರ ಸಂಬಂಧಗಳು ಹೇಗೆ ಬದಲಾಗಿವೆ ಎನ್ನುವ ನನ್ನ ಖಾಸಗೀ ಯಾತ್ರೆಯನ್ನು ಅವಲೋಕಿಸಿದಾಗ ಕಾಣುವ ಬದಲಾವಣೆಗಳು, ಹಾಗೂ ನಾನು ಇದೇ ರೀತಿಯ ಉನ್ನತ ವ್ಯಾಸಂಗ ಮಾಡುತಿದ್ದಾಗ ಇದ್ದ ನನ್ನ ಗುರುಗಳೊಂದಿಗಿನ ಸಂಬಂಧಗಳ ಪರಿ ಮೂಲಭೂತವಾಗಿ ಬದಲಾಗಿದೆ. ಆದರೆ ಅದು ಪತನದ ದಾರಿ ಹಿಡಿದಿದೆ ಎಂದು ಹೇಳಲು ನಾನು ತಯಾರಿಲ್ಲ.

ನಮ್ಮ ಜೀವನದಲ್ಲಿ ಕಳೆದ ಮೂರು ದಶಕಗಳಲ್ಲಿ ಆಗಿರುವ ಮೂಲಭೂತ ಬದಲಾವಣೆಯ ಹಿನ್ನೆಲೆಯಲ್ಲಿ ಈ ಸಂಬಂಧಗಳನ್ನು ನಾವು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಹಾಗೂ ನಾನು ಕಲಿಸುವ ಐಐಎಂನಂತಹ ಸಂಸ್ಥೆಯ ಬೋಧನಾಪದ್ಧತಿಯ ಹಿನ್ನೆಲೆಯನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿನ ಬೋಧನಾ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಪೂರ್ಣಾವಧಿ ಕ್ಯಾಂಪಸ್ಸಿನಲ್ಲಿರುವುದೂ ಹಾಗೂ ತರಗತಿಯ ಆಚೆಯೂ ಕಲಿಕೆಯ ಪ್ರಕ್ರಿಯೆಯಿರುವ ಭಿನ್ನತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಬರುತ್ತಾರೆ, ಹಾಗೂ ಅವರೆಲ್ಲ ಸಾಕಷ್ಟು ಜೀವನವನ್ನು ಕಂಡವರಾಗಿರುತ್ತಾರೆ ಅನ್ನುವುದನ್ನೂ ನಾವು ನನಪಿಟ್ಟುಕೊಳ್ಳಬೇಕಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ನನ್ನ ಬೋಧಕರೊಂದಿಗೆ ನನಗಿದ್ದ ಸಂಬಂಧ ಹಾಗೂ ನನ್ನ ವಿದ್ಯಾರ್ಥಿಗಳೊಂದಿಗೆ ಕಾಲಾಂತರದಲ್ಲಿ ಬದಲಾಗುತ್ತಿರುವ ಸಂಬಂಧಗಳನ್ನು ಅವಲೋಕಿಸುತ್ತೇನೆ.

ಊಹಿಸಿಕೊಳ್ಳಿ:
- ಒಂದು ಎಸ್.ಟಿ.ಡಿ ಫೋನ್ ಮಾಡಲು ಹಾಸ್ಟೆಲ್ಲಿನಿಂದ ಒಂದು ಕಿಲೋಮೀಟರ್ ದೂರ [ಟೆಲಿಗ್ರಾಂ ಕೊಡಲು ಸಾಧ್ಯವಿರುವ] ಹೆಡ್ ಪೋಸ್ಟಾಫೀಸಿಗೆ ಹೋಗಬೇಕು. ರಾತ್ರೆ ಹನ್ನೊಂದರ ನಂತರ ಫೋನ್ ಮಾಡಿದರೆ ದಿನದ ದರದ ಕಾಲು ಭಾಗದಲ್ಲಿ ಮಾತನಾಡಬಹುದು.
- ಟೆಲಿವಿಷನ್ ಅನ್ನುವುದು ಕಪ್ಪು ಬಿಳುಪಿನ ಡಬ್ಬದಲ್ಲಿ ಬರುವ ರೈತರ ಕಾರ್ಯಕ್ರಮ. ಸಿನೇಮಾ ಅಂದರೆ ಥಿಯಟರಿಗೆ ಹೋಗಿ ನೂಕುನುಗ್ಗಲಲ್ಲಿ ಟಿಕೆಟ್ ಪಡೆದು ಬೆವರುತ್ತಾ ಪುಳಕಿತಗೊಂಡು ಬರಬೇಕು. ಅಥವಾ ೧೬ ಎಂಎಂನ ಪ್ರೊಜೆಕ್ಟರನ್ನು ಬಯಲಿನಲ್ಲಿಟ್ಟು ದೊಡ್ಡ ಪರದೆ ಕಟ್ಟಿ [ಸ್ವದೇಸ್ ಚಿತ್ರದಲ್ಲಿದ್ದಂತೆ] ನೋಡಬೇಕು.
ದೊಡ್ಡ ಮಹಾಪ್ರಬಂಧಗಳನ್ನು ಟೈಪ್ ಮಾಡಿಸಬೇಕು. ಅದನ್ನು ಬೈಂಡ್ ಮಾಡಿಸಲು ಎರಡು ದಿನದ ಕಾಲ ಸಮಯ ಬೇಕಾಗಿತ್ತು.
- ರೈಲಿನಲ್ಲಿ ದೂರದೂರಿಗೆ ಹೋಗಬೇಕಾದರೆ ಟಿಕೆಟ್ ಬುಕ್ ಮಾಡಿಸುವುದೂ ಒಂದು ದಿನದ ಕೆಲಸ. ರೈಲನ್ನು ಮಧ್ಯದಲ್ಲಿ ಬದಲಾಯಿಸಬೇಕಿದ್ದರೆ ಮುಂದಿನ ಸ್ಟೇಷನ್ನಿಗೆ ರೈಲ್ವೇ ಟೆಲಿಗ್ರಾಂ ಕೊಟ್ಟು ರಿಜರ್ವೇಷನ್ ಆಗಬಹುದೆಂದು ಪ್ರಾರ್ಥಿಸುತ್ತಾ ಇದ್ದಿರಬೇಕು.

ಜೀವನ ಹೀಗಿದ್ದಾಗ ಮನೆಗೆ ಫೋನ್ ಮಾಡುವುದೂ ದಿನಕ್ಕೆರಡು ಬಾರಿಯಲ್ಲ - ಬದಲಿಗೆ ವಾರಕ್ಕೊಮ್ಮೆ, ಅಥವಾ ಎರಡು ವಾರಕ್ಕೊಮ್ಮೆ. ಪ್ರಯಾಣಗಳೂ ಮೊದಲೇ ಯೋಚಿಸಿ ಒಂದು ವಾರದ ರಜೆಯಿದ್ದರೆ ಮಾತ್ರ ಕೈಗೊಳ್ಳುವುದಾಗಿತ್ತು. ಹೀಗಾಗಿ ಕ್ಯಾಂಪಸ್ಸಿನಲ್ಲೇ ಬಿದ್ದಿರುತ್ತಿದ್ದೆವು. ಕ್ಯಾಂಪಸ್ಸಿನಲ್ಲಿದ್ದಾಗ ನಮ್ಮ ಮೇಷ್ಟರುಗಳನ್ನೂ ನೋಡುತ್ತಲೇ ಇರುತ್ತಿದ್ದೆವು.

ಸಿನೆಮಾ ನೋಡಲು ಹೋದಾಗ ಇರುವ ನಾಲ್ಕಾರು ಥಿಯೇಟರುಗಳಲ್ಲೇ ನಮ್ಮ ಗುರುಗಳೂ ಅವರ ಸಂಸಾರವೂ ಕಾಣುವುದು ಅಸಹಜವೇನೂ ಆಗಿರಲಿಲ್ಲ. ಸಂಜೆಯ ವೇಳೆಗೆ ’ಸಚ್ ಕಾ ಸಾಮನಾ’ ಸೀರಿಯಲ್ ನೋಡಬೇಕೆಂಬ ತುರ್ತು ಯಾರಿಗೂ ಇರುತ್ತಿರಲಿಲ್ಲ. ಹೀಗಾಗಿ ನಾವುಗಳು ಸಮಯ ಕಳೆಯಲು ನಮ್ಮ ಭಾಷೆ ಬಲ್ಲ ಗುರುಗಳ ಮನೆಗೆ ಹೋಗುವುದೂ ಅಲ್ಲಿಂದ ಪುಸ್ತಕಗಳನ್ನು ಎರವಲು ಪಡೆಯುವುದೂ, ಸಾಧ್ಯವಾದರೆ ಒಳ್ಳೆಯ ಊಟ ತಿಂಡಿಗಳು ಗಿಟ್ಟುತ್ತದೆಯೇ ಎಂದು ನೋಡುವುದೂ ಒಂದು ಕಾಯಕವಾಗಿತ್ತು.

ಇಂದಿನ ವಿದ್ಯಾರ್ಥಿ ತನ್ನ ಕೋಣೆಯಲ್ಲಿ ಕೂತು ಎಲ್ಲಿಂದಲೋ ಡೌನ್‍ಲೋಡ್ ಮಾಡಿದ ಕಮೀನೇ ಚಿತ್ರವನ್ನು ಖರ್ಚಿಲ್ಲದೇ ನೋಡುತ್ತಾನೆ. ಅಲ್ಲೇ ಕೂತು ಡ್ಯಾಡ್ ಜೊತೆ ಮಾತನ್ನೂ ಆಡುತ್ತಾನೆ, ಆ ಮಾತುಗಳನ್ನು ಆಡುತ್ತಲೇ ಡ್ಯೂಡ್ ಜೊತೆ ಚಾಟ್ ಮಾಡುತ್ತಾನೆ. ಮೂರುದಿನದ ರಜೆ ಬಂದರೆ ಮೇಕ್ ಮೈ ಟ್ರಿಪ್ಪಿನ ಸೈಟಿಗೆ ಹೋಗಿ ಕೂಲ್ ಡೀಲ್ ಯಾವುದಾದರೂ ಇದ್ದರೆ, ಟಿಕೆಟ್ ತೆಗೆದು ಮನೆಗೂ ಹೋಗಿ ಬಂದುಬಿಡುತ್ತಾನೆ. ಹಾಗೂ ಜಗತ್ತಿನ ಯಾವುದೋ ಮೂಲೆಯಲ್ಲಿರುವ ವರ್ಚುವಲ್ ಫ್ರೆಂಡನ್ನು ಸ್ಕೈಪ್ ಮೂಲಕ ಪುಸಲಾಯಿಸುತ್ತಾನೆ.

ಜಗತ್ತು, ತಂತ್ರಜ್ಞಾನ ಮೂಲಭೂತವಾಗಿ ಬದಲಾಗಿರುವಾಗ ವಿದ್ಯಾರ್ಥಿಗಳ-ಗುರುಗಳ ಸಂಬಂಧ ಮತ್ತು ಲಾವಾದೇವಿಗಳು ಬದಲಾಗುವುದೂ ಸಹಜವೇ ಆಗಿದೆ. ನಾವುಗಳು ಕೂತು ಈ ಜನರೇಷನ್ ಬಹಳ ಬಿಗಡಾಯಿಸಿಬಿಟ್ಟಿದೆ, ಗುರುಗಳೆಂದರೆ ಅವರಿಗೆ ತುಸುವಾದರೂ ಗೌರವವಿಲ್ಲ ಎಂದು ಕರುಬುತ್ತೇವೆ ನಮ್ಮ ಜನರೇಷನ್ನಿನಲ್ಲೂ ನಾವು ಲೇವಡಿ ಮಾಡುತ್ತಿದ್ದ ಗುರುಗಳಿರುತ್ತಿದ್ದರು, ಹೆದರುವ ಗುರುಗಳಿರುತ್ತಿದ್ದರು ಮತ್ತು ಗೌರವಿಸುವ ಗುರುಗಳೂ ಇರುತ್ತಿದ್ದರು. ಆದರೂ ಈಗಿನ ಜನರೇಷನ್ನಿಗೆ ತಮ್ಮ ಗುರುಗಳನ್ನು ಕಂಡರೆ ಒಂದು ಗುಡ್ ಮಾರ್ನಿಂಗ್ ಕೂಡಾ ಹೇಳುವ ಕನಿಷ್ಠ ಮರ್ಯಾದೆಯೂ ಇಲ್ಲ ಎಂದು ಕರುಬುವವರಲ್ಲಿ ನಾನೂ ಒಬ್ಬ.

ಮೊದಲಿಗೆ ವಿದ್ಯಾರ್ಥಿಗಳ ಮೆಸ್ಸಿಗೆ ಹೋಗಿ ಅವರೊಂದಿಗೆ ಹರಟೆ ಕೊಚ್ಚಿ ಒಂದು ಸಿಗರೇಟು ಬೆಳಗಿಸಿ ಬರುತ್ತಿದ್ದೆ. ಈಗ ಅದರಲ್ಲಿ ನನಗೆ ಅರ್ಥ ಕಾಣುತ್ತಿಲ್ಲ. ಹಿಪ್ ಹಾಪ್ ಸಂಗೀತದ ಬಗ್ಗೆ ನನಗೆ ಯಾವ ಜ್ಞಾನವೂ ಇಲ್ಲದ್ದು ಅವರ ತಪ್ಪಲ್ಲ. ಅವರು ಕೇವಲ ನನ್ನ ಜೊತೆಗೆ ಅರ್ಥಾತ್ ತಮ್ಮ ಗುರುಗಳ ಜೊತೆಗೆ ಬದಲಾದ ರೀತಿಯಲ್ಲಿ ಪ್ರವರ್ತಿಸುತ್ತಿಲ್ಲ. ಅವರುಗಳು ಜಗತ್ತಿನ ಜೊತೆಗೆ ವ್ಯಾಪಾರವನ್ನು ನಡೆಸುತ್ತಿರುವ ರೀತಿಯೇ ಭಿನ್ನವಾಗಿದೆ.

ಹಾಗೆಯೇ ಬೋಧನಾ ಕ್ರಮದಲ್ಲೂ ಅನೇಕ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳಿಗೆ ಇರುವ ತಂತ್ರಜ್ಞಾನದ ಅರಿವು ಅದ್ಭುತವಾದದ್ದು. ಏನೇ ವಿಚಾರವನ್ನೂ ಗೂಗಲ್ ಮೂಲಕ ಕಂಡುಹಿಡಿದು ವಾಪಸ್ಸು ನಮ್ಮತ್ತ ಪ್ರಶ್ನೆಗಳನ್ನು ಎಸೆಯುವ ತಾಕತ್ತು ಅವರಿಗಿದೆ. ಆದರೆ ಒಂದು ಮೂಲಭೂತ ಬದಲಾವಣೆಯನ್ನು ಸಮಯ ಕಳೆದಂತೆ ನಾನು ಕಂಡಿದ್ದೇನೆ. ಅದು ನಿಜಕ್ಕೂ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದೇ ಅನ್ನುವ ನಂಬುಗೆ ನನಗಿದೆ. ಉದಾಹರಣೆಗೆ ವಿದ್ಯಾರ್ಥಿಗಳು ತಮ್ಮ ಸಂಶೋಧನಾತ್ಮಕ ಬರವಣಿಗೆಯಲ್ಲಿ ಹೆಚ್ಚಿನ ಪರಿಕರಗಳನ್ನು ವೆಬ್ ಮೂಲಕ ಪಡೆಯುತ್ತಾರೆ. ವಿಕಿಪೀಡಿಯಾವೇ ಅವರಿಗೆ ಅಂತಿಮ ಅಥಾರಿಟಿ ಆಗಿಬಿಟ್ಟಿದೆ. ಗೂಗಲ್ ದೇವರ ಕೃಪಾಕಟಾಕ್ಷದಲ್ಲಿ ಬದುಕುವ ಅವರುಗಳಿಗೆ ಲೈಬ್ರರಿಗೆ ಹೋಗಿ ಹೊಸಪುಸ್ತಕದಿಂದ ಹೊಮ್ಮುವ ಹೊಸ ಅಂಟಿನ ವಾಸನೆಯನ್ನು ಆಘ್ರಾಣಿಸಿ, ಆಸಕ್ತಿಯಿಂದ ಪುಟ ತಿರುವಿಹಾಕುವ, ಜ್ಞಾನದ ಖಜಾನೆಯನ್ನು ಹುಡುಕಿ ನಡೆವ ಸಮಯವೂ ಆಸಕ್ತಿಯೂ ಕಡಿಮೆಯಾಗುತ್ತಿರುವಂತೆ ಭಾಸವಾಗುತ್ತಿದೆ.
ಎಸ್.ಎಂ.ಎಸ್.ಜನಾಂಗದವರ ಬರವಣಿಗೆಯ ಕೌಶಲವೂ ಅಷ್ಟಕ್ಕಷ್ಟೇ. ಉನ್ನತ ವಿದ್ಯಾಸಂಸ್ಥೆಗಳಲ್ಲಿರುವ ಇವರುಗಳ ಬರವಣಿಗೆ ಚೆನ್ನಾಗಿರುತ್ತದೆಂದು ಯಾರಾದರೂ ನಂಬಿ ಬಂದರೆ, ಅವರಿಗೆ ನಿರಾಶೆಯಾಗುವುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕೆ ಚಿಕ್ಕಂದಿನಿಂದಲೂ ಕೊಡುವ ಒಂದು ಪ್ರಶ್ನೆಗಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ್ದನ್ನು ಹೆಕ್ಕುವ ತರಬೇತಿಯೇ ಕಾರಣವೇನೋ. ಹೀಗಾಗಿ ಅವರಿಗೆ ಒಂದು ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳಿರಬಹುದು, ನಾಲ್ಕಕ್ಕಿಂತ ಹೆಚ್ಚು ಆಯ್ಕೆಗಳಿರಬಹುದು ಎಂದು ವಿವರಿಸುವುದು ಸರಳವೇನೂ ಅಲ್ಲ.

ಈಗಿನ ವಿದ್ಯಾರ್ಥಿಗಳು ತಮ್ಮ ಪಾಠ್ಯಕ್ರಮದಲ್ಲಿ ಎಷ್ಟು ಮಗ್ನರಾಗಿ ಅದನ್ನು ತಮ್ಮ ಕರಗತ ಮಾಡಿಕೊಳ್ಳುವ ಉತ್ಸಾಹದಲ್ಲಿರುತ್ತಾರೆಂದರೆ ಅವರ ಸಾಮಾನ್ಯ ಜ್ಞಾನ ಮತ್ತು ಇತರ ಓದು ಕುಂಠಿತವಾಗುತ್ತಿದೆಯೇ ಎಂದೂ ನನಗೆ ಅನುಮಾನ ಬರುತ್ತದೆ. ಉದಾಹರಣೆಗೆ ಸಾಹಿತ್ಯವೆಂದಕೂಡಲೇ ಅವರಿಗೆ ನೆನಪಿಗೆ ಬರುವುದು ಹ್ಯಾರಿ ಪಾಟರ್ ಮತ್ತು ಚೇತನ್ ಭಗತ್ ಮಾತ್ರವಾದರೆ ಅದೇನೂ ಉತ್ತಮ ಶಿಕ್ಷಣ/ಲಕ್ಷಣ ಅನ್ನಿಸುವುದಿಲ್ಲ. ಇಂಥ ಸ್ಪಷ್ಟತೆಯನ್ನು ಹೊಂದಿ - ಮೀನಿನ ಕಣ್ಣಿನಮೇಲಕ್ಕೆ ಗುರಿಯಿರಿಸಿರುವ ಅರ್ಜುನರಿಗೆ ವಿಶ್ವರೂಪದರ್ಶನ ಮಾಡಿಸುವ ಕೃಷ್ಣನ ಕೆಲಸ ಸರಳವಾದ್ದೇನೂ ಅಲ್ಲ. ಆ ಒಂದು ಸವಾಲು ನಾನು ಬೋಧಿಸುತ್ತಿರುವಂತಹ ಸಂಸ್ಥೆಗಳಲ್ಲಿ ಈಗೀಗ್ಗೆ ಹೆಚ್ಚಾಗಿ ಕಾಣಿಸುತ್ತಿದೆ ಅನ್ನಬಹುದು.

ನನ್ನ ವಿದ್ಯಾರ್ಥಿಗಳನ್ನು ನಾನು ಗೆಳೆಯರನ್ನಾಗಿಸಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. [ಯಾಕೆ ಗೆಳೆಯರನ್ನಾಗಿಸಿಕೊಳ್ಳಬೇಕು ಅನ್ನುವ ಇನ್ನೂ ಗಹನವಾದ ಪ್ರಶ್ನೆ ಇನ್ನೂ ಜೋರಾಗಿ ಕಾಡಿದೆ] ನನ್ನ ಜಗತ್ತಿನಲ್ಲಿ ನಾನಿರದೇ ಅವರ ಜಗತ್ತಿಗೆ ಹಣಕಿಹಾಕಿದಾಗ ಬಹುಶಃ ನಮ್ಮ ಮಾನಸಿಕ ಲಹರಿಗಳು ಒಂದೆಡೆ ಭೇಟಿಯಾಗುವ ಸಾಧ್ಯತೆಯಿರಬಹುದು. ಮೂರು ವರ್ಷಗಳ ಹಿಂದೆ ಬ್ಲಾಗ್ ಮೂಲಕ ಬರವಣಿಗೆಯನ್ನು ಕೈಗೊಳ್ಳಬಹುದು ಅನ್ನುವುದನ್ನು ನಾನು ವಿದ್ಯಾರ್ಥಿಗಳ ಮೂಲಕವೇ ಕಂಡುಕೊಂಡೆ. ಅದರಿಂದ ನನಗೆ ಆದ ವಿದ್ಯಾರ್ಥಿಗಳೆಯರು ಹಲವರು. ಆದರ ನನ್ನ ಬರಹದ ಲೋಕಕ್ಕೆ ಬಂದ ಇತರರೂ ಅನೇಕ. ಇದೇ ಒಂದು ಭಿನ್ನ ಮಾದ್ಯಮ ಅನ್ನುವ ಮನವರಿಕೆ ನನಗಾದದ್ದು ನಾನು ನನ್ನ ವಿದ್ಯಾರ್ಥಿಗಳ ಮನೋಧರ್ಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ. ಈ ಕಾಣ್ಕೆ ನನಗೆ ಕಂಡ ಕೂಡಲೇ ಅವರೊಂದಿಗೆ ಮಾತನಾಡಲು ಸಂವಹಿಸಲು ಮತ್ತೊಂದು ಮಾಧ್ಯಮ ನನಗೆ ಸಿಕ್ಕಿತು. ಬ್ಲಾಗ್ ಮೂಲಕವೂ ಮಾತನಾಡಬಹುದಿತ್ತು, ಬ್ಲಾಗ್ ಬಗ್ಗೆಯೂ ಮಾತನಾಡಬಹುದಿತ್ತು.

ಹದಿನಾರು ವರ್ಷದ ಮಗನಿರುವ ನನಗೆ ನನ್ನ ಮಗನನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುವವರೇ ನನ್ನ ವಿದ್ಯಾರ್ಥಿಗಳು. ಎಲ್.ಓ.ಎಲ್ ಎಂದರೆ ಜೋರಾಗಿ ನಗುವುದು. ಬಿಆರ್‌ಬಿ ಅಂದರೆ ಕ್ಷಣದಲ್ಲೇ ವಾಪಸ್ಸಾಗುವೆ ಅನುವುದೂ, ಆರ್ಕುಟ್, ಫೇಸ್‍ಬುಕ್ ಏನೆಂದೂ ಅರಿಯದ ನನಗೆ ಆ ಬಗ್ಗೆ ಕಲಿಸಿರುವುದೂ, ಬರೇ ರಾಜ್‍ದೂತ್ ಯಜ್ಡಿಗಳ ಬಗ್ಗೆ ಮಾತ್ರ ಅರಿವಿದ್ದ ನಮ್ಮ ಜನಾಂಗಕ್ಕೆ ಹೊಸ ಬೈಕುಗಳ ಬಗ್ಗೆ - ಹೊಸ ಮೊಬೈಲುಗಳನ್ನು ಉಪಯೋಗಿಸುವಬಗ್ಗೆ, ಹೊಸತಂತ್ರಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ನಾನು ನನ್ನ ವಿದ್ಯಾರ್ಥಿಗಳು ಕಲಿಸಿದ್ದಾರೆ. ಹೀಗಾಗಿ ಅವರ ಜೊತೆಗಿನ ಸಂಬಂಧ ಮುಂಚಿಗಿಂತ ಭಿನ್ನವಾಗಿದೆ ಅನ್ನುವುದನ್ನಷ್ಟೇ ಹೇಳಬಲ್ಲೆ - ಆದರೆ ಅವನತಿಗೊಂಡಿದೆಯೇ? ಗೊತ್ತಿಲ್ಲ.

ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ಇಲ್ಲೇ ವಾಸ್ತವ್ಯವಿರಬೇಕಿರುವ ಅವಶ್ಯಕತೆಯಿದ್ದ ಹಳೆಯ ಕಾಲದ ಪಾಠಕ್ರಮವನ್ನು ನಾವು ಪಾಲಿಸುತ್ತಿರುವುದರಿಂದ ಬಹುಶಃ ಸಂಬಂಧಗಳು ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಹನ ರೀತಿ ಪತನಗೊಂಡಿದೆ ಅಂತ ಆಗಾಗ ಅನ್ನಿಸುವುದುಂಟು.

ಮೊನ್ನೆ ಏರ್‌ಪೋರ್ಟಿನಲ್ಲಿ ಸಿಕ್ಕ ಒಬ್ಬ ವಿದ್ಯಾರ್ಥಿಯನ್ನು ಮಾತನಾಡಿಸ ಹೊರಟರೆ ಅವನು ನನ್ನನ್ನು ಗುರುತೇ ಹಿಡಿಯಲಿಲ್ಲ. ನಾನು ಬೇಸರಗೊಂಡೆ. ಈಗಿನ ಕಾಲದ ವಿದ್ಯಾರ್ಥಿಗಳೇ ಹೀಗೆ ಎಂದು ಮನಸ್ಸಿನಲ್ಲೇ ಕರುಬಿದೆ. ಸ್ವಲ್ಪ ಸಮಯದ ನಂತರ ಆತ ಬಳಿಗೆ ಬಂದು "ಪ್ರೊಫೆಸರ್... ಇದು ನೀವೇನಾ?" ಎಂದು ಕೇಳಿದ. "ಅಲ್ಲಯ್ಯಾ ನಾನು ಮಾತನಾಡಿಸುವ ಪ್ರಯತ್ನ ಮಾಡಿದರೂ ಮುಖ ತಿರುಗಿಸಿಕೊಂಡು ಹೋದವನು ಈಗ ಇದ್ದಕ್ಕಿದ್ದ ಹಾಗೆ ಬಂದು ಮಾತನಾಡಿಸುತ್ತಿದ್ದೀಯಲ್ಲಾ?" ಅಂತ ಕೇಳಿದರೆ. "ನೀವು ಇಷ್ಟುದ್ದ ಕೂದಲು ಬೆಳೆಸಿದ್ದೀರಿ. ಯೂ ಹ್ಯಾವ್ ಚೇಂಜ್ಡ್.. ಯೂ ಲುಕ್ ಕೂಲ್. ನಿಮ್ಮ ಈಚಿನ ಫೋಟೊವನ್ನು ಫೇಸ್‍ಬುಕ್ ಮೇಲೆ ಹಾಕಿದ್ದರೆ ಈ ಫಜೀತಿಯೇ ಇರುತ್ತಿರಲಿಲ್ಲ" ಅಂದ. ಆತ ತನ್ನ ಕೂದಲನ್ನು ಕತ್ತರಿಸಿದ್ದ. ಚೆಡ್ಡಿಹಾಕಿ ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದವನು ಸೂಟ್ ಧರಿಸಿದ್ದ. ಕೂದಲನ್ನು ಕತ್ತರಿಸಿದ್ದ. "ಯೂ ಲುಕ್ ಹಾಟ್" ಅಂದೆ. ಅವನು ಬೆವರೊರೆಸಿಕೊಂಡ.....

ಹೀಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಸಂಬಂಧಗಳು ವಿಕಸನಗೊಳ್ಳುವ ರೀತಿ ಬದಲಾಗುತ್ತಿದೆ. ನನ್ನ ವಿದ್ಯಾರ್ಥಿಗಳೊಂದಿಗೆ ನಾನು ಮಾತನಾಡಲು ಅವರನ್ನು ಅರ್ಥಮಾಡಿಕೊಂಡು ಅವರ ಅದ್ಭುತ ಜಗತ್ತಿಗೆ ಪ್ರವೇಶಿಸಬೇಕೆನ್ನುವುದನ್ನು ಅವರು ನನಗೆ ಬಾರಿಬಾರಿ ಕಲಿಸಿದ್ದಾರೆ. ನಮ್ಮ ಜಮಾನಾದಲ್ಲಿ ಟಿವಿ ಇರಲಿಲ್ಲ ಅನ್ನುವುದು ಅವರಿಗೆ ಮಹತ್ವದ ಸಂಗತಿ ಅನ್ನಿಸುವುದೇ ಇಲ್ಲ. ಹಾಗಿರುವುದೇ ಸರಿ!


Tuesday, March 31, 2009

ಹೃದ್ರೋಗಿಗಳು ಕಡಿಮೆಯಾಗುತ್ತಾರೆ



ಮಯೂರ ಕೇಳಿದ ಪ್ರಶ್ನೆಗಳು: 
  • ಬರಹಗಾರರು ನಗುವುದನ್ನು ಮರೆತಿದ್ದಾರೆಯೇ? ಅಥವಾ ಅವರು ನಗಬಾರದೇ? 
  • ಎಲ್ಲ ಸಾಹಿತ್ಯ  ಕೃತಿಗಳಲ್ಲೂ ಹಿತ್ತಲಿನಿಂದ ಹಿಮಾಲಯದವರೆಗೆ ಸಮಸ್ಯೆ ಸಮಸ್ಯೆ. ಜೀವನದ ಸಣ್ಣಪುಟ್ಟ ಖುಷಿ ಯಾಕೆ ಮುಖ್ಯವೆನ್ನಿಸುತ್ತಿಲ್ಲ?
  • ಸಾಹಿತಿಗಳು ಒಂದಾದರೂ ನಗೆ ಕೃತಿ ಬರೆಯಲೇಬೇಕು ಎಂದು ಕಡ್ಡಾಯ ಮಾಡಿದರೆ ಹೇಗೆ?
  • ನೆನಪಿಸಿಕೊಂಡಾಗೆಲ್ಲಾ ನಗುವಂಥಹ ನೀವು ಓದಿದ ಬರಹ?

ಉತ್ತರ:

ಬರಹಗಾರರು ನಗುವುದನ್ನ ಮರೆತಿಲ್ಲ. ಅವರು ಬರೆದ ಘನಘಂಭೀರ ಕೃತಿಗಳನ್ನು ವಿಮರ್ಶಕರು ಕುಯ್ದುಕುಯ್ದು ಒಳಗೆ ಅರ್ಥವನ್ನು ಹುಡುಕುವುದನ್ನು ನೋಡಿ ಅದನ್ನು ಅರ್ಥೈಸುವ ರೀತಿಯನ್ನ ನೋಡಿ, 
ವಿಮರ್ಶಕರ ಪದಪ್ರಯೋಗವನ್ನು ನೋಡಿ ನಗುತ್ತಲೇ ಇದ್ದಾರೆ. 

ಹೀಗೆ ಹೇಳಿದಾಗ ಬರಹಗಾರರಿಗೂ ವಿಮರ್ಶಕರಿಗೂ ವ್ಯತ್ಯಾಸವಿದೆ ಅನ್ನುವುದನ್ನು ನಾವು ಗಮನಿಸಬೇಕು. ಕವಿ, ಕಥೆಗಾರ, ನಾಟಕಕಾರರನ್ನು ಜನ ಬರಹಗಾರರೆಂದು ಗುರುತಿಸುತ್ತಲೇ ವಿಮರ್ಶಕರನ್ನು ಬೇರೆಯಾಗಿ ಇಟುಬಟ್ಟಿದ್ದಾರೆ! ಆದರೆ ಘಂಭೀರ ಕೃತಿಗಳಲ್ಲೂ ಹಾಸ್ಯವನ್ನು ಹುಡುಕುವುದು, ಖುಷಿಯನ್ನು ಹುಡುಕುವ ಜವಾಬ್ದಾರಿ ಇರುವುದು ಓದುಗನ ಮೇಲೆ ಅವಲಂಬಿತವಾಗಿದೆ. ಓದುಗನೇ ಆ ಕೃತಿಯನ್ನು ಘಂಭೀರವಾಗಿ ಸ್ವೀಕರಿಸಿದರೆ ಅದು ಬರಹಗಾರನ ತಪ್ಪೇ? 

ಎಲ್ಲ ಸಾಹಿತ್ಯ ಕೃತಿಗಳಲ್ಲೂ ಸಮಸ್ಯೆಗಳೇ ಅಂತ ನೀವಂದಿದ್ದೀರಿ. ಈ ಸಮಸ್ಯೆಗಳಿಂದ ಪಲಾಯನಮಾಡಲು ಈ ಟೀವಿಯವರು ನಿಮ್ಮನ್ನು ನಗಿಸಲು ಕಾಮೆಡಿ ಕಿಲಾಡಿಗಳು ಅನ್ನುವ ಕಾರ್ಯಕ್ರಮವನ್ನು ರೂಪಿಸಿದರು. ಅದನ್ನು ನೋಡಿದರೆ ಈ ಕಾರ್ಯಕ್ರಮವೇ ಒಂದು ಸಮಸ್ಯೆ ಅನ್ನುವುದು ನಿಮಗೆ ವೇದ್ಯವಾಗುತ್ತದೆ. ಹೀಗಾಗಿ ಒಮ್ಮೊಮ್ಮೆ ಪರಿಹಾರಕ್ಕಿಂತ ಸಮಸ್ಯೆಯ ಜೊತೆ ಜೀವನ ಮಾಡುವುದೇ ಒಳ್ಳೆಯದೇನೋ. 

ನಮ್ಮ ಲೇಖಕರು ತಮ್ಮ ಸಮಸ್ಯೆಗಳನ್ನು ಬರಹರೂಪಕ್ಕಿಳಿಸಿ ಹೃದಯದಿಂದ ಹೊರಹಾಕುವುದು ಒಂದು ಥರ ಒಳ್ಳೆಯದಲವೇ? ಹೀಗೆ ಹೃದ್ರೋಗಿಗಳ ಸಂಖ್ಯೆಯಾದರೂ ಕಡಿಮೆಯಾಗುತ್ತದೆ. ಅಕಸ್ಮಾತ್ ಬರಹಗಾರರು ಕಡ್ಡಾಯವಾಗಿ ಹಾಸ್ಯ ಬರೆದರೆ, ಕಾಮೆಡಿ ಕಿಲಾಡಿಗಳ ಗತಿಯೇನು?

ವ್ಯಾಲೆಂಟೈನ್ಸ್ ಡೇ ಆಚರಿಸಬಾರದೆಂದು ಕೂಗಾಡುವ ಮುತಾಲಿಕ್‍ ನಿಮಗೆ ಸಮಸ್ಯೆಯಾಗಿ ಕಾಣುತ್ತಾರೆಯೇ? ಸ್ವಲ್ಪ ಯೋಚಿಸಿ ನೋಡಿ, ಮದುವೆ ಮಾಡಿಕೊಳ್ಳದಿರುವ ಆತ ತನ್ನ ಮೇಲೆ ಇಲ್ಲದ ಜವಾಬ್ದಾರಿಯನ್ನು ಹೇರಿಕೊಂಡು ಅದನ್ನು ತನ್ನ ಸೇನೆಯ ಮೂಲಕ ಪರಿಹರಿಸುತ್ತೇನೆಂದು ಹೊರಟಿರುವುದರಲ್ಲಿ ನಿಮಗೆ ಹಾಸ್ಯ ಕಾಣುವುದಿಲ್ಲವೇ? ಆತನಿಗೆ ಪಿಂಕ್ ಚೆಡ್ಡಿ ಕಳಿಸುವ ಹೆಂಗಸರು ನಿಮಗೆ ಮಂದಹಾಸ ನೀಡಲಿಲ್ಲವೇ?

ಮುತಾಲಿಕ್‍ಗೆ ಮದುವೆ ಮಾಡಿಸುತ್ತೇನೆಂದು ಹೊರಟಿರುವ ವಾಟಾಳ್ ಕಂಡರೆ ನಮಗೆ ನಗು ಬರುವುದಿಲ್ಲವಾ?

ರೋಜಾ ಹೂವು ವ್ಯಾಪಾರ ಹೆಚ್ಚುತ್ತದಾದ್ದರಿಂದ ವ್ಯಾಲೆಂಟೈನ್ಸ್ ಡೇ ಸಮರ್ಥಿಸುತ್ತೇವೆನ್ನುವ ರೈತ ಸಂಘದವರ ವಕ್ತವ್ಯದಲ್ಲಿ ನಗೆಯಿಲ್ಲವೇ?

ಹೀಗಾಗಿ ತಪ್ಪಿರುವುದು ಬರಹಗಾರರಲ್ಲಲ್ಲ. ಅದರಲ್ಲಿ ಹಾಸ್ಯ ಕಾಣದ, ಅದನ್ನು ನೋಡಿ ನಗಲಾರದ ಓದುಗರಲ್ಲಿ, ವಿಮರ್ಶಕರಲ್ಲಿ.

ನನ ಓದಿನ ಬಗ್ಗೆ: ನೆನಪಿಸಿಕೊಂಡಾಗಲೆಲ್ಲ ನಗುವಂಥ ಕಥೆ ಯಶವಂತ ಚಿತ್ತಾಲರ ಕಳ್ಳ ಗಿರಿಯಣ್ಣ, ಜಯಂತ ಕಾಯ್ಕಿಣಿಯ ದಗಡೂ ಪರಬನ ಅಶ್ವಮೇಧ; ಬೇಂದ್ರೆ ಬರೆದ ತಮ್ಮದೇ ಅಣಕವಾಡು - ಬೆಕ್ಕು ಹಾರುತಿದೆ ನೋಡಿದಿರಾ; ವೈನ್‍ಕೆ ಅವರ ವಂಡರ್ ಪುಸ್ತಕಗಳು, ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ [ಕವಿ-ತೆಗಳು], ತೀರ್ಥರೂಪ [ಅಥವಾ ಮಧ್ಯ ಇಷ್ಟು ಟೈಟ್ ಆದ್ರೆಹೇಗೆ ಸ್ವಾಮಿ]; ಡುಂಡಿರಾಜರ ಹನಿಗಳು; ವಿಜಿಭಟ್ಟರ ಕವಿತೆಗಳು; ಕೆವಿ ತಿರುಮಲೇಶರ ತರಂಗಾಂತರ ಅನ್ನುವ ಗಂಭೀರ ಕಿರುಕಾದಂಬರಿಯ ಭಾಗಗಳು, ವಿರೇಚನ ಅನ್ನುವ ಕಥೆ, ಮತ್ತು ಅವರದೇ ಅವಧ ಕವಿತಾಗುಚ್ಛ. ನೆನಪಿಸಿಕೊಳ್ಳದಿದ್ದರೂ ನಗು ತರಿಸುವ ಪುಸ್ತಕ ಮೊಗಳ್ಳಿ ಗಣೇಶರ ತಕರಾರು.


  

Sunday, March 29, 2009

ಶುಷ್ಕ ವಕ್ರ ಈ ನಗೆ



ಹಾಸ್ಯದ ಬಗ್ಗೆ ವಿಶ್ಲೇಷಣೆ ಬರೆಯಬೇಕು ಎಂದು ಹಾಸ್ಯ ಬರೆಯುವ ಲೇಖಕರನ್ನಾಗಲೀ ಅಥವಾ ವಿಮರ್ಶಕರನ್ನಾಗಲೀ ಕೇಳುವುದೇ ಒಂದು ವಿಡಂಬನೆಯಲ್ಲವೇ. ಇನ್ನು ಆ ಬಗ್ಗೆ ಗಂಭೀರವಾಗಿ ಬರೆದರೆ ವಿಮರ್ಶಕರ ಮೀಮಾಂಸೆಯಾಗುತ್ತದೆ. ಆದರೆ ಅದನ್ನೇ ಲೇವಡಿ ಮಾಡಿದರೆ ಹೇಳಿದ ಕೆಲಸವನ್ನು ಮಾಡದಂತೆ ಆಗುತ್ತದೆ! ಈ ಇಕ್ಕಟ್ಟಿನಲ್ಲಿ ನನ್ನನ್ನು ಸಿಕ್ಕಿಹಾಕಿ ಎಲ್ಲ ಕುಹಕವನ್ನೂ ತೆರೆಮರೆಯಲ್ಲಿ ನೋಡುತ್ತಿರುವ ವಿಜಯ ಕರ್ನಾಟಕದ ಸಂಪಾದಕ ವೃಂದದ ಖುಷಿಯೇ ವ್ರೈ ಹಾಸ್ಯ. ಇದು ಡ್ರ್ರೈ ಹಾಗೂ ರೈ [ಐಶ್ವರ್ಯ, ಪ್ರಕಾಶ್...] ಹಾಸ್ಯಕ್ಕಿಂತ ಭಿನ್ನ.

ಅಹಮದಾಬಾದಿನ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದೀರಿ. ಎದುರಿಗೆ ಒಂದು ದೊಡ್ಡ ಫಲಕ. "ಕುಡಿದು ಕಾರನ್ನು ಓಡಿಸುವುದು ಅಪಾಯಕಾರಿ". ಸ್ವಾತಂತ್ರ ಬಂದಾಗಿನಿಂದಲೂ ಸಂಪೂರ್ಣ ಪಾನ ನಿಷೇಧ ಇರುವ ರಾಜ್ಯದ ಪ್ರಮುಖನಗರದ ಪೋಲೀಸು ಇಲಾಖೆ ಈ ಇಂಥ ಫಲಕವನ್ನು ಹಾಕಿದರೆ ನಿಮಗೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಈ ಫಲಕದ ಹಿಂದಿರಬಹುದಾದ ವಿಚಿತ್ರ ವಿಡಂಬನೆ - ಪಾನ ನಿಷೇಧವನ್ನು ಎಷ್ಟರ ಮಟ್ಟಿಗೆ ಆ ನಗರದಲ್ಲಿ ಸಫಲಗೊಳಿಸಿದ್ದಾರೆನ್ನುವ ಪ್ರಶ್ನೆಯಿಂದ ಹಿಡಿದು, ಗುಂಡುಸಿಗದ ಚಡಪಡಿಕೆಯ ನಡುವೆ ನಿಮ್ಮನ್ನು ಕುಹಕ ಮಾಡುತ್ತಿರುವ ಸರಕಾರದ ಸೇಡಿನ ಬಗೆಗಿನವರೆಗೂ ಆಲೋಚನೆ ಹೊರಟರೂ, ಕಡೆಗೆ ಮುಖದಲ್ಲಿ ಉಳಿಯುವುದು ಒಂದು ಮಂದಹಾಸವೇ.. ಇದು ಗುಂಡಿರದ ಗುಜರಾತಿನ ಡ್ರೈ ಹ್ಯೂಮರ್ರೋ, ರೈ ಹ್ಯುಮರ್ರೋ ತಿಳಿಯದು. 

ಹಾಗೆ ನೋಡಿದರೆ ಸಾಹಿತ್ಯದಲ್ಲಿ ವಿದೂಷಕನ ಪಾತ್ರವೇ ರೈಗೆ ಹೇಳಿಮಾಡಿಸಿದ್ದು. ದೊಡ್ಡ ದೊಡ್ಡ ಅಹಂನ ಬೆಲೂನುಗಳನ್ನು ಪುಟ್ಟ ಪುಟ್ಟ ಸೂಜಿಗಳಿಂದ ಚುಚ್ಚುವ, ಎಲ್ಲಿಂದ ಹೇಗೆ ಏಟು ಬಿತ್ತು ಎಂದು ತಿಳಿಯದಂತೆಯೇ ತಟ್ಟಿಸುವುದು "ಅಳುವುದೋ ನಗುವುದೋ ನೀವೇ ಹೇಳಿ" ಎನ್ನುವಂತೆ ಮಾಡಿಸುವ ತೆನಾಲಿ ರಾಮ ಮತ್ತು ಬೀರಬಲ್ಲರೂ ಈ ರೀತಿಯ ಹಾಸ್ಯದ ದೊಡ್ಡ ಉದಾಹರಣೆಗಳು. ಹೀಗಾಗಿ ವ್ರೈಯನ್ನು ಒಂದು ರೀತಿಯಲ್ಲಿ ವಿದೂಷಣ ಎಂದು ಕರೆಯಬಹುದೇನೋ! - ಇದೂ ಒಂದು ಬಗೆಯ ದೂಷಣವೇ.. ಆದರೆ ಅದು ಪಡೆಯುವ ರೂಪ ವಿಚಿತ್ರದ್ದಾದ್ದರಿಂದ ವಿದೂಷಣ.

ಹಾಲಿವುಡ್ಡಿನಲ್ಲಿ ವುಡೀ ಆಲೆನ್ ವಿದೂಷಣಕ್ಕೆ ಪ್ರಮುಖ ಉದಾಹರಣೆಯಾಗಿ ನಿಲ್ಲುತ್ತಾರೆ. "ವಾಟ್ಸ್ ಅಪ್ ಟೈಗರ್ ಲಿಲ್ಲಿ" ಅನ್ನುವ ಬಾಂಡ್ ಶೈಲಿಯ ಚಿತ್ರದ ಅಣಕವಾಡಿನಿಂದ ಹಿಡಿದು - ಸ್ಲೀಪರ್ ಅನ್ನುವ ಸೈನ್ಸ್ ಫಿಕ್ಷನ್ ಬಗೆಯ ಚಿತ್ರದಲ್ಲೂ ನಿಮಗೆ ಈ ವ್ರೈ ಕಾಣಸಿಗುತ್ತದೆ. ಸ್ಲೀಪರಿನಲ್ಲಿ ಎಲ್ಲವೂ ಭವಿಷ್ಯದಲ್ಲಿ ನಡೆಯುತ್ತದೆ. ಮೈಥುನಕ್ಕೂ ಒಂದು ಯಂತ್ರ! ಆ ಕಾರ್ಯದಿಂದ ಹೊಮ್ಮುವ ಸದ್ದುಗಳೂ ಸ್ಟೀರಿಯೋಫೋನಿಕ್ ಸರೌಂಡ್ ಸೌಂಡಿನಂತೆ ಹೊರಹೊಮ್ಮುತ್ತದೆ. 

ಹಾಗೆಯೇ ವುಡಿಯದಲ್ಲದ ಮತ್ತೊಂದು ಚಿತ್ರ ’ವಾಟ್ಸ್ ಸೋ ಬ್ಯಾಡ್ ಅಬೌಟ್ ಫೀಲಿಂಗ್ ಗುಡ್?" ಈ ಚಿತ್ರದಲ್ಲಿ ಒಂದು ಪಕ್ಷಿಯಿಂದಾಗಿ ಒಂದು ವೈರಸ್ ನಗರಾದ್ಯಂತ ಹಬ್ಬುತ್ತದೆ. ಆ ವೈರಸ್ಸಿನಿಂದಾಗಿ ನಗರದ ಜನರೆಲ್ಲಾ ಹಗುರವಾಗಿ ಖುಷಿಯಿಂದ ಇರುತ್ತಾರೆ. ಆದರೆ ಆ ನಗರದ ಮ್ಯುನಿಸಿಪಾಲಿಟಿ ಆ ವೈರಸ್ಸನ್ನು ತಡೆಗಟ್ಟಿ ಈ ರೋಗವನ್ನು ನಿರ್ನಾಮ ಮಾಡಬೇಕು. ಹೀಗೆ ಆ ವೈರಸ್ಸನ್ನು ಹಬ್ಬುವ ಆ ಪಕ್ಷಿಯನ್ನು ಹಿಡಿದು ’ಫೀಲಿಂಗ್ ಗುಡ್’ ರೋಗವನ್ನು ತಡೆಗಟ್ಟುವುದೇ ಚಿತ್ರದ ಕಥೆ..... ಯಾವುದು ರೋಗ, ಏನನ್ನು ತಡೆಗಟ್ಟಬೇಕು... 

ಹಿಂದಿ ಸಿನೇಮಾದಲ್ಲಿ ರೈನ ಪ್ರಯೋಗ ಮಾಡಿರುವವರಲ್ಲಿ ನನಗೆ ನೆನಪಾಗುವುದು ಶ್ಯಾಂ ಬೆನೆಗಲ್.  ಮಂಡಿ ಸಿನೇಮಾದಲ್ಲಿ ಕೋಠಿಯನ್ನು ನಡೆಸುವ ಶಬನಾ ಮನೆಯಲ್ಲಿ ನಾಸಿರುದ್ದೀನ್ ಶಾ ಕೆಲಸ ಮಾಡುತ್ತಿರುತ್ತಾನೆ. ಶಬನಾ ಬಳಿ ಒಂದು ಗಿಳಿ. ಗಿಳಿ ಪಂಜರದಲ್ಲಿ. ನಾಸಿರ್ ಅತೀ ಮೂರ್ಖ ಕೆಲಸಗಾರ. ಅವನು ಎರಡೂ ಕೈಯಲ್ಲಿ ನೀರು ತುಂಬಿದ ಬಕೆಟ್ಟನ್ನು ಹೊತ್ತು ತರುತ್ತಿರುವಾಗ ಗಿಳಿ ಪಂಜರದಿಂದ ಹಾರಿಹೋಗುತ್ತದೆ. ಅದನ್ನು ಹಿಡಿಯುವ ಕೆಲಸ ನಾಸಿರ್‍ ನದ್ದು. ಅವನು ಬಕೆಟ್ಟನ್ನು ಕೆಳಗಿಡದೆಯೇ ಗಿಣಿಯನ್ನು ಅಟ್ಟಿಸಿ ಮನೆಯೆಲ್ಲಾ ಓಡುತ್ತಾನೆ. ಮುಂದೆ ಸ್ಮಿತಾ ಪಾಟೀಲ್ ಪಾತ್ರವೂ ಅವಳಿಂದ ಹೀಗೇ ತಪ್ಪಿಸಿಹೋಗುವುದಕ್ಕೆ ಇದು ತಯಾರಿಯ ಸೀನಿನಂತೆ ಕಾಣುತ್ತದೆ. ಇಲ್ಲಿ ನಾಸಿರ್ ನ ಪ್ರಯತ್ನವನ್ನು ನೋಡಿ ನಗಬೇಕೇ?...

ತಿರುಮಲೇಶರ ಕಾವ್ಯದಲ್ಲಿ ನಮಗೆ ಸಾಕಷ್ಟು ವ್ರೈ ಸಿಗುತ್ತದೆ.
"ಅಶ್ವಿನಿಗೆ ಕುಂಡೆಯಲ್ಲೊಂದು ಕುರುವಾದ್ದರಿಂದ
ಅವಳು ಒಂದು ರೀತಿಯ ಲಾಸ್ಯದಿಂದ ನಡೆಯುತ್ತಾಳೆ
ಒಂದು ರೀತಿಯ ಆಲಸ್ಯದಿಂದ ಕೂಡುತ್ತಾಳೆ.
ಜನ ದಂಗಾಗಿದ್ದಾರೆ
ಇಂಥ ಮಾದಕ ನಡಿಗೆಯನ್ನು ಅವರು ಹಿಂದೆಂದೂ ನೋಡಿಯೇ ಇಲ್ಲ...."
ಇಲ್ಲಿ ಯಾರು ಯಾರನ್ನು ಯಾವರೀತಿಯಾಗಿ ಲೇವಡಿ ಮಾಡುತ್ತಿದ್ದಾರೆ ಅನ್ನುವುದು ತಿಳಿಯುವುದಕ್ಕೆ ಮುನ್ನವೇ ಚುರುಕು ಮುಟ್ಟಿ ಹೋಗಿರುತ್ತದೆ.

ಹೀಗೇ ಗುರುಪ್ರಸಾದ್ ಕಾಗಿನೆಲೆಯವರ ಬೀಜ ಕಥೆಯ ಭಾಗವನ್ನು ನೋಡಿ:
"ಟೆಸ್ಟಿಕಲ್ಲಿನ ಕ್ಯಾನ್ಸರು ತುಂಬಾ ಒಳ್ಳೆಯ ಕ್ಯಾನ್ಸರಂತೆ. ಪರೀಗೆ ಕ್ಯಾನ್ಸರಲ್ಲೂ ಒಳ್ಳೇದಿರುತ್ತೆ ಅಂತ ಗೊತ್ತಿರಲಿಲ್ಲ. ಫಣೀಶ ಹೇಳಿದ್ದ: 'ಅಕಸ್ಮಾತ್ ದೇವರು ಏನಾರ ಪ್ರತ್ಯಕ್ಷ ಆಗಿ ನಿನಗೆ ಯಾವುದಾದರೂ ಒಂದು ಕ್ಯಾನ್ಸರು ಬರಲೇಬೇಕು, ಲಂಗು, ಲಿವರು, ಕಿಡ್ನಿ, ಬ್ರೈನು, ಬ್ರೆಸ್ಟು ಯಾವುದು ಬೇಕು ಕೇಳ್ಕೋ ಅಂತ ಕೇಳಿದರೆ, ಗಂಡಸರಿಗೆ ಬೆಸ್ಟ್ ಅಂದರೆ ಟೆಸ್ಟಿಕಲ್ಲಿನ ಕ್ಯಾನ್ಸರ್ ಕೊಡಪ್ಪಾ ಅಂತ ಕೇಳ್ಕೋಬೇಕು, ಗೊತ್ತಾ. ಬರೀ ಕೀಮೋ ತೆಗೋಬೇಕಾದರೆ ಮಾತ್ರ ತೊಂದರೆ. ಆಮೇಲೆ, ನೂರಕ್ಕೆ ಆಲ್ಮೋಸ್ಟ್ ನೂರುಭಾಗ ವಾಸಿ ಆಗುತ್ತೆ." ಇದರಲ್ಲಿ ಕಾಣುವ ಹಾಸ್ಯ ಕಪ್ಪು ಹಾಸ್ಯವಲ್ಲ, ಒಂದು ರೀತಿಯ ತೀವ್ರ ವಿಡಂಬನೆಯಿಂದ ಕೂಡಿದ್ದು. 

ಅಂಗೂರ್ ಚಿತ್ರದಲ್ಲಿ ನಾಯಕನ ಸಹಾಯಕ ಹಗ್ಗ ಕೊಳ್ಳಲು ಹೋಗುತ್ತಾನೆ. ಅಂಗಡಿಯಲ್ಲಿ ಹಗ್ಗದ ಬೆಲೆ ವಿಚಾರಿಸುತ್ತಾನೆ. ಅಂಗಡಿಯವನು ಯಾವುದಕ್ಕೆ ಉಪಯೋಗಿಸುತ್ತೀರಿ? ಅನ್ನುವುದಕ್ಕೆ ಸಹಾಯಕ ಗಂಭೀರವಾಗಿಯೇ "ನೇಣು ಹಾಕಿಕೊಳ್ಳಲು" ಎನ್ನುತ್ತಾನೆ. ಅಂಗಡಿಯವನು... "ಅದು ಬೇಡ, ಇದು ತೆಗೊಳ್ಳಿ ಮಜಬೂತಾಗಿದೆ" ಅನ್ನುತ್ತಾ ಬೇರೆಯದೇ ಒಂದು ಹಗ್ಗವನ್ನು ಎತ್ತಿ ಕೊಡುತ್ತಾನೆ. ಆ ಹಗ್ಗದ ಮೇಲೆ ಚೌಕಾಶಿ ನಡೆಯುತ್ತದೆ. ಈ ಘಟನೆಯನ್ನು ಮಿಕ್ಕ ಘಟನಾವಳಿಯ ನಡುವೆ ಜೋಡಿಸದೇ ಕಂಡರೆ ವ್ರೈ ಎನ್ನಬಹುದು. ಆದರೆ, ಆ ಘಟನೆ ನಡೆಯುವುದೇ ಬೇರೊಂದು ಪರಿಸ್ಥಿತಿಯಲ್ಲಿ. ಅಲ್ಲಿ ಯಾರಿಗೂ ನೇಣು ಹಾಕಿಕೊಳ್ಳುವ ಉದ್ದೇಶವಿಲ್ಲ ಅನ್ನುವುದು ನೋಡುಗನಿಗೆ ಗೊತ್ತು. ಹೀಗಾಗಿ ಅದು ಶುದ್ಧ ಹಾಸ್ಯವಾಗಿ ಯಾವ ವಿಶೇಷಣಕ್ಕೂ ಅರ್ಹವಾಗುವುದಿಲ್ಲ!

ಚಾರ್ಲಿ ಚಾಪ್ಲಿನ್ ಚಿತ್ರಗಳು ಸ್ಲಾಪ್ ಸ್ಟಿಕ್ಕಿನಂತೆ ಕಂಡರೂ ಅದರಲ್ಲಿನ ಹಾಸ್ಯ ಒಮ್ಮೊಮ್ಮೊ ಡಾರ್ಕ್ ಆಗಿಯೂ ಹೆಚ್ಚಾಗಿ ರೈ ಆಗಿಯೂ ಇರುವುದನ್ನು ನೋಡಬಹುದು. ಕಿಡ್ ಚಿತ್ರದಲ್ಲಿ ಮೊಳೆ ತಿನ್ನುವ ಪ್ರಸಂಗ, ಗ್ರೇಟ್ ಡಿಕ್ಟೇಟರ್ ನಲ್ಲಿ ಭೂಗೋಳದ ಬಲೂನನ್ನ ಹಿಡಿದು ಕುಣಿಡಾಡುತ್ತಿರುವ ಚಾಪ್ಲಿನ್... ಹಾಗೂ ಅದು ಟಪ್ಪೆಂದು ಅವನ ಮುಖದಲ್ಲಿ ಸ್ಫೋಟಗೊಳ್ಳುವ ರೀತಿ ವ್ರೈನ ನಮೂನೆ! ಮಾಡರ್ನ್ ಟೈಮ್ಸ್ ನಲ್ಲಿ ದೊಡ್ಡ ಟ್ರಕ್ಕಿನ ಹಿಂದೆ ಒಂದು ಕೆಂಪು ಬಣ್ಣದ ಬಟ್ಟೆ ನೇತಾಡುತ್ತಿರುವುದನ್ನು ಚಾಪ್ಲಿನ್ ಹಿಡಿದಾಗ ಅವನನ್ನು ಕಮ್ಯುನಿಸ್ಟ್ ಎಂದು ಬಂಧಿಸುವ ಘಟನೆ ರೈನ ಲಕ್ಷಣವನ್ನು ತೋರಿಸುತ್ತದೆ. ಕಪ್ಪು ಬಿಳುಪು ಚಿತ್ರದಲ್ಲಿ - ಮಾತೇ ಇಲ್ಲದ ಮೂಕಿಯಲ್ಲಿ ಆ ಬಟ್ಟೆಯ ಬಣ್ಣವನ್ನು ಎಷ್ಟು ಸಶಕ್ತವಾಗಿ ’ಕೆಂಪು’ ಎನ್ನುವ ನಂಬಿಕೆ ಬರುವಂತೆ ಚಾಪ್ಲಿನ್ ಮಾಡುತ್ತಾರೆ ಎಂದು ಕಂಡಾಗ ಆ ಕಲೆ ಎಲ್ಲವನ್ನೂ ಮೀರಿ ನಿಲ್ಲುವುದಿಲ್ಲವೇ? 

ಹಾಗೆ ನೋಡಿದರೆ ಚಾಪ್ಲಿನ್ ಕ್ಯಾಥೋಲಿಕ್ ಕ್ರಿಸ್ಟಿಯನ್ ಅನ್ನುವ ಮಂಗಳೂರಿನವರ ಕುಹಕ ಯಾವ ಬ್ರಾಂಡಿನ ಹಾಸ್ಯವೋ ನನಗೆ ತಿಳಿಯದು. ಹೀಗೆಯೇ ಪ್ರಮೋದ್ ಮುತಾಲಿಕ್ ಗೆ ಪಿಂಕ್ ಚೆಡ್ಡಿಗಳನ್ನು ಕಳಿಸಿದ ಮುಂಬೈಯಿನ ಪಬ್-ಗೋಯಿಂಗ್, ಲೂಸ್, ಫಾರ್ವಡ್ ವುಮೆನ್ ಮಾಡಿದ ಚರ್ಯೆಯಲ್ಲಿ ಐರನಿ, ಸಟೈರು, ಕುಹಕ ವಿದ್ದರೂ ರೈ ಇರಲಿಲ್ಲವೆನ್ನಿಸುತ್ತದೆ. ಆದರೆ ನಾವಿರುತ್ತಿರುವ ಹುಚ್ಚು ಪ್ರಪಂಚದಲ್ಲಿ ನಮಗೆ ಒಂದು ಕಿರುನಗು ಬೀರಲೂ ಯಾವುದೇ ಬ್ರಾಂಡಿನ ಹಾಸ್ಯದ ಅವಶ್ಯಕತೆಯಿರಬಹುದು! ಆದರೆ ಕಾಮೆಡಿ ಕಿಲಾಡಿಗಳು ಅನ್ನುವ ಹಾಸ್ಯವನ್ನೇ ಮಾರ ಹೊರಟ ಚಿತ್ರಹಿಂಸಾತ್ಮಕ ಕಾರ್ಯಕ್ರಮದ ಹಿಂದೆ ಯಾವ ರೀತಿಯ ಪ್ರಾಕ್ಟಿಕಲ್ ಹಾಸ್ಯವಿರಬಹುದು. ಯಾರಿಗಾದರೂ ತಿಳಿದರೆ ಅದರ ಮೀಮಾಂಸೆ ನನಗೆ ಕಳಿಸಿ ಪ್ಲೀಸ್....


  

Monday, March 9, 2009

ಕಾವೇರಿ ಆದೇಶ: ಕೆಲವು ಪ್ರಶ್ನೋತ್ತರಗಳು

ಮೂಲ: ರಾಮಸ್ವಾಮಿ. ಆರ್. ಐಯ್ಯರ್ ಅನುವಾದ: ಎಂ.ಎಸ್.ಶ್ರೀರಾಮ್. [ಲೇಖಕರು ೧೯೫೩ರಿಂದ ೧೯೯೦ರವರೆಗೆ ಐ.ಎ.ಎಸ್ ಅಧಿಕಾರಿಯಾಗಿ ಸರಕಾರದಲ್ಲಿ ಕೆಲಸ ಮಾಡಿದವರು. ೧೯೮೫ರಿಂದ ಹೆಚ್ಚಾಗಿ ಜಲಸಂಪನ್ಮೂಲ, ಅದಕ್ಕೆ ಸಂಬಂಧಿಸಿದ ಸರಕಾರಿ ನೀತಿಯ ಬಗ್ಗೆ ಹೆಚ್ಚಿನ ಸಂಶೋಧನೆ ಮತ್ತು ಬರವಣಿಗೆಯನ್ನು ಮಾಡಿದ್ದಾರೆ. ೧೯೮೫-೮೭ರ ನಡುವೆ ಭಾರತ ಸರಕಾರದಲ್ಲಿ ಅವರು ನೀರಾವರಿ ವಿಭಾಗದ ಸಚಿವರಾಗಿದ್ದರು. ೧೯೯೦-೯೯ ನಡುವೆ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ದುಡಿದರು. ಜಲಸಂಪನ್ಮೂಲಗಳ ಬಗ್ಗೆ ಅವರು ವಿಸ್ತಾರವಾಗಿ ಬರೆದಿದ್ದಾರೆ ಹಾಗೂ ಅನೇಕ ತಜ್ಞಸಮಿತಿಗಳಲ್ಲಿ ಭಾಗವಹಿಸಿದ್ದಾರೆ. ಈ ಲೇಖನ ಫೆಬ್ರವರಿ ೨೭, ೨೦೦೭ರ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ [EPW] ಪತ್ರಿಕೆಯಲ್ಲಿ ಪ್ರಕಟವಾಯಿತು. ಲೇಖನವನ್ನು ಅನುವಾದಿಸಿ ಪ್ರಕಟಿಸಲು ಅನುಮತಿ ನೀಡಿದ ಅಯ್ಯರ್ ಅವರಿಗೂ, ಈಪಿಡಬ್ಲು ಪತ್ರಿಕೆಗೂ ಕೃತಜ್ಞತೆಗಳು. ಕಾವೇರಿಯ ಬಗ್ಗೆ ಮಾಹಿತಿಯೊಂದಿಗಿನ ಚರ್ಚೆಯಾಗಲಿ ಅನ್ನುವ ಉದ್ದೇಶದಿಂದ ಇದನ್ನು ಇಲ್ಲಿ ಹಾಕುತ್ತಿದ್ದೇನೆ. ಈ ಬಗ್ಗೆ ನನಗೆ ಹೆಚ್ಚಿನ ತಿಳುವಳಿಕೆ ಇಲ್ಲವಾದ್ದರಿಂದ ನಾನು ಈ ಬಗ್ಗೆ ಯಾವ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಈ ಚರ್ಚೆಯಲ್ಲಿ ಏನಾದರೂ ಪ್ರಶ್ನೆಗಳು ಉದ್ಭವವಾದರೆ ಅದನ್ನು ಅಯ್ಯರ್ ಅವರ ಬಳಿಗೆ ಒಯ್ದು ಅವರ ಉತ್ತರವನ್ನು ಹಾಕುವುದಕ್ಕೆ ನಾನು ಸಿದ್ಧ, ಒಟ್ಟಿನಲ್ಲಿ ಆರೋಗ್ಯಪೂರ್ಣ ಚರ್ಚೆ ಆಗಬೇಕೆನ್ನುವುದಷ್ಟೇ ನನ್ನ ಉದ್ದೇಶ. ಮೂಲ ಲೇಖನವನ್ನು ಓದಬಯಸಿದವರು ಅದನ್ನು ಇಲ್ಲಿ ಕಾಣಬಹುದು.ಈ ಅನುವಾದವನ್ನು ಯಾರ ಕೈಲಾದರೂ ಒಮ್ಮೆ ಓದಿಸಿ ಅಂತ ಅಯ್ಯರ್ ನನ್ನನ್ನು ಕೋರಿದ್ದರು. ಹೀಗಾಗಿ ಅದನ್ನು ಪ್ರಿಯ ಎಚ್.ಎಸ್.ಆರ್ ಅವರಿಗೆ ಕಳಿಸಿದ್ದೆ. ಆದರೆ ಅವರಿಗೆ ಸಮಯಾವಕಾಶವಾಗಲಿಲ್ಲ ಅನ್ನಿಸುತ್ತದೆ. ಹೀಗಾಗಿ ನಾನು ಎರಡನೇ ಅಭಿಪ್ರಾಯವಿಲ್ಲದೆಯೇ ಇದನ್ನು ಹಾಕುತ್ತಿದ್ದೇನೆ. ಈ ಲೇಖನ ಅನುವಾದಿಸುತ್ತಿರುವಾಗ ಕರ್ನಾಟಕದಿಂದ ಸಿಟ್ಟಿನ ಪತ್ರಗಳು ಅಯ್ಯರ್ ಅವರಿಗೆ ಹೋದುವೆಂದು ಅವರು ನೊಂದು ಬರೆದಿದ್ದರು. ದಯವಿಟ್ಟು ಈ ಲೇಖನವನ್ನು ಓದಿ ಪ್ರತಿಕ್ರಿಯಿಸುವವರು ಅದರಲ್ಲಿನ ವಾಸ್ತವಾಂಶಗಳ ಬಗ್ಗೆ ಚರ್ಚಿಸಿದರೆ ಆ ಚರ್ಚೆಯನ್ನು ಮುಂದುವರೆಸಲು ಉಪಯುಕ್ತವಾಗುತ್ತದೆ.] 

ಬಹಳ ದಿನಗಳಿಂದ ನಿರೀಕ್ಷಿಸಿದ್ದ ಕಾವೇರಿ ಆಯೋಗದ ಅಂತಿಮ ತೀರ್ಪು ಕಡೆಗೂ ಬಂದಿದೆ. ಮೊದಲಿಗೆ ಆಯೋಗದಲ್ಲೇ ಕೆಲವು ಭಿನ್ನಾಭಿಪ್ರಾಯಗಳಿರಬಹುದೆಂಬ ಸೂಚನೆಗಳು ಇದ್ದುವಾದರೂ ಅದು ಸರ್ವಾನುಮತದ ತೀರ್ಪೆಂಬುದು ತೃಪ್ತಿಯ ಮಾತು. ಇದರಿಂದ ಆಯೋಗ ಮುಕ್ತಿ ಪಡೆದಂತಾಗಿದೆ. ಈ ಲೇಖನದ ಮುಖ್ಯ ಉದ್ದೇಶ ಆಯೋಗದ ತೀರ್ಪಿಗೆ ಪತ್ರಿಕೆಗಳಲ್ಲಿ ಬಂದಿರುವ ಕೆಲ ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಅವುಗಳ ವಿಷಯದಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ನೀಡುವುದಕ್ಕೆ ಸೀಮಿತವಾಗಿದೆ. ಕಾವೇರಿ ವಿವಾದದ ಇತಿಹಾಸ, ಅಲ್ಲಿಂದ ಮುಂದೆ ನಡೆದ ಪ್ರಕ್ರಿಯೆಗಳು ಮತ್ತು ಅಂತಿಮವಾಗಿ ಬಂದ ತೀರ್ಪು - ಈ ಘಟ್ಟಗಳನ್ನು ಮೊದಲಿಗೆ ಪರಿಶೀಲಿಸೋಣ. ನಂತರ ತೀರ್ಪಿನ ಹೂರಣವನ್ನು ಅರ್ಥಮಾಡಿಕೊಳ್ಳೋಣ. ತದನಂತರ ಈ ತೀರ್ಪಿಗೆ ಬಂದ ಪ್ರತಿಕ್ರಿಯೆಗಳನ್ನು ಚರ್ಚಿಸೋಣ. [ಈ ವಿವಾದದ ಇತಿಹಾಸವು ಇದೇ ಲೇಖಕರ ಹಿಂದಿನ ಬರಹಗಳ ಮೇಲೆ ಆಧರಿತವಾಗಿವೆ]

ಕಾವೇರಿ ಅನ್ನುವುದು ಕಾವೇರಿ ಮತ್ತು ಅದರ ಉಪನದಿಗಳಾದ ಹೇಮಾವತಿ, ಕಬಿನಿ, ಭವಾನಿ, ಅಮರಾವತಿ, ಮತ್ತಿತರ ಸಣ್ಣ ನದಿಗಳಿಂದ ಒಡಗೂಡಿದ ಒಂದು ನದೀಪದ್ಧತಿ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಮುಖ್ಯ ರಾಜ್ಯಗಳೆಂದರೆ ಕರ್ನಾಟಕ ಮತ್ತು ತಮಿಳುನಾಡು. ಈ ಜಲಾನಯನದ ಪುಟ್ಟ ಭಾಗ ಕೇರಳದಲ್ಲೂ, ಅಂತಿಮ ಭಾಗ ಪುದುಚ್ಚೇರಿಯ ಭಾಗವಾಗಿರುವ ಕರೈಕಲ್‍ನಲ್ಲೂ ಇದೆ. 

ವಿವಾದದ ಇತಿಹಾಸ


ಕಾವೇರಿ ವಿವಾದದ ಇತಿಹಾಸ ಹತ್ತೊಂಬತ್ತನೇ ಶತಮಾನದಷ್ಟು ಹಿಂದಿನದ್ದಾಗಿದೆ. ಆಗ್ಗೆ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಮದ್ರಾಸು ಪ್ರೆಸಿಡೆನ್ಸಿ ಮತ್ತು ಮೈಸೂರಿನ ರಾಜವಂಶದ ಆಳ್ವಿಕೆಯ ನಡುವೆ ಈ ವಿವಾದ ಎದ್ದಿತ್ತು. ವಿವಾದದ ಮೂಲ ಪ್ರಶ್ನೆಯೆಂದರೆ ಮದ್ರಾಸು ಪ್ರೆಸಿಡೆನ್ಸಿಯಲ್ಲಿರುವ ಜನರ ಹಿತಕ್ಕೆ ಧಕ್ಕೆಯಾಗದಂತೆ ಮೈಸೂರು ರಾಜ್ಯದಲ್ಲಿ ಅಣೆಕಟ್ಟುಗಳನ್ನೂ ನೀರಾವರಿಗೆ ಅನುಕೂಲವಾಗುವಂತಹ ಇತರ ಕೆಲಸಕಾರ್ಯಗಳನ್ನು ಹೇಗೆ ಕೈಗೊಳ್ಳುವುದು ಅನ್ನುವುದರ ಬಗ್ಗೆಯೇ ಆಗಿತ್ತು. ಸುಮಾರುದಿನಗಳ ಚರ್ಚೆಯ ನಂತರ ೧೮೯೨ರಲ್ಲಿ ಒಂದು ಒಪ್ಪಂದ ಆಗಿತ್ತು; ಮತ್ತೆ ವಿವಾದ; ಕೇಂದ್ರ ಸರಕಾರದ ಉಸ್ತುವಾರಿಯಲ್ಲಿ ಮಧ್ಯಸ್ತಿಕೆ; ಮಧ್ಯಸ್ತಿಕೆಯ ನಿರ್ಧಾರದ ವಿರುದ್ಧ ಲಂಡನ್‍ನಲ್ಲಿದ್ದ ಮುಖ್ಯಸಚಿವರ ಮುಂದೆ ಮನವಿ ಸಲ್ಲಿಕೆ; ಮತ್ತು ಸಚಿವರ ಸೂಚನೆಯ ಮೇರೆಗೆ ಮತ್ತೆ ಮಾತುಕತೆಯ ಮುಂದುವರಿಕೆ; ಕಡೆಗೆ ೧೯೨೪ರಲ್ಲಿ ಮತ್ತೊಂದು ಒಪ್ಪಂದ. ಆ ಒಪ್ಪಂದದ ವಿವರಗಳನ್ನು ಇಲ್ಲಿ ಪರಿಶೀಲಿಸುವುದಿಲ್ಲವಾದರೂ, ಆ ಬಗ್ಗೆ ಮುಂದೆ ಪ್ರಸ್ತಾಪ ಮಾಡುತ್ತೇನೆ. ಆದರೆ ಅದರಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆ ಒಪ್ಪಂದದ ಕೆಲವು ಕರಾರುಗಳನ್ನು ೫೦ ವರ್ಷಗಳ ನಂತರ ಅಂದರೆ ೧೯೭೪ ರಲ್ಲಿ ಮರುಪರಿಶೀಲಿಸಲು ಆಸ್ಪದವಿತ್ತು. ಆದರೆ ೧೯೭೪ರಲ್ಲಿ ಅದರ ಮರುಪರಿಶೀಲನೆ ಆಗಲಿಲ್ಲ. ಆ ಒಪ್ಪಂದವನ್ನು ನವೀಕರಿಸಲೂ ಇಲ್ಲ - ಅದನ್ನು ಸಮಾಪ್ತಿಗೊಳಿಸಲೂ ಇಲ್ಲ. [೧೮೯೨ರ ಮತ್ತು ೧೯೨೪ರ ಒಪ್ಪಂದಗಳು ಮುಂದುವರೆದಿದ್ದವೇ? ಮದರಾಸು ಪ್ರೆಸಿಡೆನ್ಸಿಗೂ ಮೈಸೂರು ಸಂಸ್ಥಾನಕ್ಕೂ ನಡೆದ ಒಪ್ಪಂದ ನಂತರ ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ರಚಿತವಾದ ತಮಿಳುನಾಡು ಮತ್ತು ಕರ್ನಾಟಕವೆಂಬ ಹೊಸ ಪ್ರದೇಶಕ್ಕೂ ಅನ್ವಯಗೊಂಡವೇ ಅನ್ನುವುದೂ ಈ ರಾಜ್ಯಗಳ ನಡುವಿನ ವಿವಾದದ ಅಂಶಗಳಲ್ಲೊಂದು]. ಈಗಿನ ರೂಪದಲ್ಲಿ ನಮ್ಮೆದುರಿಗಿರುವ ಕಾವೇರಿ ವಿವಾದ ಪ್ರಾರಂಭವಾಗುವುದು ೧೯೭೦ರ ಸರಿಸುಮಾರಿಗೆ. ಈ ವಿವಾದ ಕಾವೇರಿಯ ನೀರನ್ನು ಈ ನಾಲ್ಕೂ [ಕರ್ನಾಟಕ, ತಮಿಳುನಾಡು, ಕೇರಳ, ಪುದುಚ್ಚೇರಿ] ರಾಜ್ಯಗಳು ಹಂಚಿಕೊಳ್ಳುವುದರ ಬಗ್ಗೆ ಆಗಿತ್ತು. 

ಆಯೋಗದ ರಚನೆ



ಕರ್ನಾಟಕ ತಮಿಳುನಾಡಿನ ನಡುವೆ ೧೯೭೦ ರಿಂದಾರಂಭವಾಗಿ ಎರಡು ದಶಕಗಳ ವರೆಗೂ ಆಗಾಗ ಮಾತುಕತೆ ನಡೆಯುತ್ತಲೇ ಬಂದಿತ್ತಾದರೂ ಯಾವ ಫಲವೂ ದೊರೆತಿರಲಿಲ್ಲ. ಈ ರಾಜ್ಯಗಳ ನಡುವೆ ಒಪ್ಪಂದವಾಗುವಂತೆ ಅನೇಕಬಾರಿ ಕೇಂದ್ರ ಸರಕಾರ ಪ್ರಯತ್ನಮಾಡಿದರೂ ಫಲ ಸಿಕ್ಕಿರಲಿಲ್ಲ. ೧೯೭೨ರಲ್ಲಿ ವಾಸ್ತವಾಂಶಗಳನ್ನು ಕಂಡುಹಿಡಿಯಲು ನಿಯಮಿಸಿದ ಕಮಿಟಿಯ ಮತ್ತು ತಜ್ಞರ ಮತ್ತೊಂದು ಕಮಿಟಿಯ ಶಿಫಾರಸಿನ ಆಧಾರವಾಗಿ ಆಗಸ್ಟ್ ೧೯೭೬ರಲ್ಲಿ ಒಂದು ಒಪ್ಪಂದವನ್ನು ತಯಾರಿಸಲಾಗಿತ್ತು. ಈ "ಒಪ್ಪಂದ"ವನ್ನು ಲೋಕಸಭೆಯಲ್ಲೂ ಘೋಷಿಸಲಾಯಿತು. ದುರಂತವೆಂದರೆ ಆ ಘೋಷಣೆ ಅವಸರದ್ದಾಗಿತ್ತು. ಆಗ ತಮಿಳುನಾಡು ಕೆಲಕಾಲದ ಮಟ್ಟಿಗೆ ಕೇಂದ್ರದ ಆಳ್ವಿಕೆಯಡಿಯಿದ್ದು ಚುನಾಯಿತ ಸರಕಾರ ಬರುವವರೆಗೂ ಕಾಯುವುದು ಒಳ್ಳೆಯದು ಎಂದು ನಿರ್ಧರಿಸಲಾಯಿತು; ಮುಂದೆ ಎಐಎಡಿಎಂಕೆಯ ಚುನಾಯಿತ ಸರಕಾರ ಅಧಿಕಾರ ಸ್ವೀಕರಿಸಿದಾಗ ಅದು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಲಿಲ್ಲ. ಅದಕ್ಕೆ ಕಾರಣ ಈ ಒಪ್ಪಂದ ಅವರಿಗೆ ಸಂಪೂರ್ಣ ಸಮಾಧಾನವನ್ನು ಒದಗಿಸಿರಲಿಲ್ಲ. ಆಗ ವಿವಾದಕ್ಕೆ ತೆರೆ ಬೀಳಬಹುದೆಂಬ ಆಶಾವಾದದ ವಾತಾವರಣ ಇಲ್ಲವಾಯಿತು.

ಆನಂತರವೂ ಕೇಂದ್ರ ಸರಕಾರ ಈ ವಿವಾದವನ್ನು ಇತ್ಯರ್ಥ ಮಾಡಲು ಪ್ರಯತ್ನಗಳನ್ನು ಮುಂದುವರೆಸುತ್ತಲೇ ಇತ್ತು, ಆದರೆ ಮುಖ್ಯಮಂತ್ರಿಗಳ ಮಟ್ಟದಲ್ಲಿ ಚರ್ಚೆಯೇ ಆಗದಿದ್ದ ಕಾರಣ ಈ ವಿವಾದ ಇತ್ಯರ್ಥವಾಗದೆಯೇ ನಿಂತುಬಿಟ್ಟಿತು. ಕಡೆಗೆ ೧೯೮೬ರಲ್ಲಿ ತಮಿಳುನಾಡು ಸರಕಾರ ಅಂತರ-ರಾಜ್ಯ ಜಲ ವಿವಾದಗಳ ಕಾಯಿದೆ ೧೯೫೬ರಡಿಯಲ್ಲಿ ಈ ವಿವಾದವನ್ನು ಇತ್ಯರ್ಥ ಮಾಡಲು ಒಂದು ಆಯೋಗವನ್ನು ನಿಯಮಿಸಬೇಕೆಂದು ಕೋರಿಕೆ ನೀಡಿತು. ಹಲವು ಕಾರಣಗಳಿಗಾಗಿ ಕೇಂದ್ರ ಸರಕಾರ ಇಂಥ ಆಯೋಗವನ್ನು ತಕ್ಷಣವೇ ನಿಯಮಿಸಲಿಲ್ಲ; ಬದಲಿಗೆ ಮಾತುಕತೆಯಿಂದ ಇದನ್ನು ಇತ್ಯರ್ಥ ಮಾಡಿಕೊಳ್ಳಬೇಕೆಂಬುದೇ ಸರಕಾರದ ಇರಾದೆಯಾಗಿತ್ತು. ಈ ಮಧ್ಯದಲ್ಲಿ ಬಹಳದಿನಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ವಾಯಿದೆಬಿದ್ದಿದ್ದ ಕಾವೇರಿಯಿಂದ ನೀರನ್ನು ನೀರಾವರಿಗೆ ಪೂರೈಸಬೇಕೆನ್ನುವ ತಮಿಳುನಾಡಿನ ಕೆಲ ರೈತರ ಮನವಿ ವಿಚಾರಣೆಗೆ ಬಂದಿತು. ಸರ್ವೋಚ್ಚ ನ್ಯಾಯಾಲಯ ಆವರೆಗೆ ನಡೆದಿದ್ದ ಮಾತುಕತೆಯ ವಿಫಲತೆ, ಹಾಗೂ ಆಯೋಗವನ್ನು ನಿಯಮಿಸಬೇಕೆನ್ನುವ ತಮಿಳುನಾಡು ಸರಕಾರದ ಕೋರಿಕೆ ಹಾಗೇ ಇದ್ದದ್ದನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ತಿಂಗಳೊಳಗಾಗಿ ಇಂಥ ಆಯೋಗವನ್ನು ನಿಯಮಿಸಬೇಕೆಂಬ ಆದೇಶ ಹೊರಡಿಸಿತು. ಹೀಗೆ ಭಾರತ ಸರಕಾರ ಜೂನ್ ೨, ೧೯೯೦ರಂದು ಕಾವೇರಿ ಜಲಕ್ಕೆ ಸಂಬಂಧಿಸಿದ ಆಯೋಗವನ್ನು ನಿಯಮಿಸಿತು. 

ಭಾರತೀಯ ಸಂಯುಕ್ತ ವ್ಯವಸ್ಥೆಯಡಿಯಲ್ಲಿ ಸಂವಿಧಾನದ ೨೬೨ನೇ ಕಲಮು ಮತ್ತು ಆ ಕಲಮಿನಡಿಯಲ್ಲಿ ರಚಿಸಿರುವ ೧೯೫೬ರ ಅಂತರ-ರಾಜ್ಯ ಜಲ ವಿವಾದಗಳ ಕಾಯಿದೆ ಈ ವಿಷಯ ಪರಿಹಾರದ ಮೂಲಭೂತ ಆಧಾರವಾಗಿದೆ; ಈ ಚೌಕಟ್ಟು ರಾಜ್ಯಗಳ ನಡುವಿನ ಜಲಮೂಲಗಳ ಬಗೆಗಿನ ವಿವಾದಗಳನ್ನು ಪರಿಹರಿಸಿಕೊಳ್ಳಲು ಇರುವ ಮಾರ್ಗ. ಈ ಕಾಯಿದೆಯನ್ವಯವೇ ಕೃಷ್ಣಾ, ಗೋದಾವರಿ, ನರ್ಮದಾ ಆಯೋಗಗಳೂ ಹಿಂದೆ ಸ್ಥಾಪಿತವಾಗಿದ್ದು, ಅದೇ ಕಾಯಿದೆಯಡಿಯಲ್ಲಿ ೧೯೯೦ರಲ್ಲಿ ಕಾವೇರಿ ಆಯೋಗವನ್ನೂ ಸ್ಥಾಪಿಸಲಾಯಿತು. ಈ ವ್ಯವಸ್ಥೆ ಕೆಲಸಮಾಡುತ್ತಿದ್ದ ರೀತಿ, ಅದಕ್ಕೆ ಬೇಕಿದ್ದ ಬದಲಾವಣೆಗಳು, ಹಾಗೂ ಕಾಯಿದೆಗೆ ೨೦೦೨ರಲ್ಲಿ ತಂದ ಬದಲಾವಣೆಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಬದಲಿಗೆ ಕಾವೇರಿ ವಿವಾದದ ಮಟ್ಟಿಗೆ ಮೊದಲಿನಿಂದಲೂ ಇತ್ಯರ್ಥದ ಮಾರ್ಗ ಕಡಿದಾದದ್ದಾಗಿತ್ತು ಅಂದಷ್ಟೇ ಹೇಳಬಹುದು.
 

ವಿವಾದದ ರೂಪುರೇಶೆಗಳು 


ಈ ವಿವಾದದ ಸಾರ ಇರುವುದು ನೀರಾವರಿಯಾಧಾರದ ಮೇಲೆ ಕೃಷಿಯನ್ನು ಕಾಲಾಂತರದಿಂದ ಕೈಗೊಳ್ಳುತ್ತಾ ಬಂದಿರುವ, ಆ ಕಾರಣದಿಂದ ಕಾವೇರಿಯ ನೀರನ್ನು ಬಳಸುತ್ತಿರುವ, ಆದರೆ ನದಿಪ್ರವಾಹದ ಅಂತಿಮ ತುದಿಯಲ್ಲಿರುವ [ತಮಿಳುನಾಡು] ಮತ್ತು ಪ್ರವಾಹದಾದಿಯಲ್ಲಿರುವ, ನೀರಾವರಿ ಯೋಜನೆಗಳನ್ನು ನಂತರ ಕೈಗೊಂಡ, ಆದರೆ ತ್ವರಿತಗತಿಯಲ್ಲಿ ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಿದ, ಮೇಲ್ಮಟ್ಟದಲ್ಲಿರುವ ಕಾರಣಕ್ಕಾಗಿ ಜಲಸಂಪನ್ಮೂಲದ ಮೇಲೆ ಹೆಚ್ಚಿನ ಹತೋಟಿಯಿರುವ ರಾಜ್ಯವಾದ ಕರ್ನಾಟಕದ ಅವಶ್ಯಕತೆಗಳ ನಡುವಿನ ಜಟಾಪಟಿಗೆ ಸಂಬಂಧಿಸಿದ್ದು. ಮೇಲ್ಮಟ್ಟದಲ್ಲಿರುವ ಆದರೆ ಜಲಸಂಪನ್ಮೂಲವನ್ನು ಮಿತವಾಗಿ ಆಶಿಸುತ್ತಿರುವ ಕೇರಳ, ಮತ್ತು ಕಟ್ಟಕಡೆಯಲ್ಲಿರುವ ಅತೀ ಕಡಿಮೆ ಸಂಪನ್ಮೂಲವನ್ನು ಆಶಿಸುತ್ತಿರುವ ಪುದುಚ್ಚೇರಿಗಳೂ ಈ ವಿವಾದದ ಭಾಗಿಗಳಾಗಿದ್ದಾವೆ. ಯಾವುದೇ ನ್ಯಾಯಯುತ ಹಂಚಿಕೆಯ ಯೋಜನೆ ಈ ನಾಲ್ಕೂ ರಾಜ್ಯಗಳ ನ್ಯಾಯಸಮ್ಮತವಾದ ಆಸಕ್ತಿಗಳನ್ನು ಮೈಗೂಡಿಸಿಕೊಂಡಿರಬೇಕು. ಆದರೆ ದುರಾದೃಷ್ಟವಶಾತ್, ರಾಜಕೀಯ ಕಾರಣಗಳಿಂದಾಗಿ ಎರಡೂ ಮುಖ್ಯ ರಾಜ್ಯಗಳು ಈ ಬಗ್ಗೆ ವರ್ಷಾನುಗಟ್ಟಲೆಯಿಂದ ತೀವ್ರ ನಿಲುವುಗಳನ್ನು ತೆಗೆದುಕೊಳ್ಳುತ್ತಾ ಜನತೆಯ, ನಾಡಿನ ಅಸ್ಮಿತೆಯ ಭಾವನೆಗಳೊಂದಿಗೆ ಈ ವಿಷಯವನ್ನು ಬೆಸೆದಿಟ್ಟಿದ್ದಾರಾದ್ದರಿಂದ, ಈ ರಾಜ್ಯಗಳು ಕಾವೇರಿಯ ವಿಷಯದಲ್ಲಿ ಯಾವುದೇ ರಿಯಾಯಿತಿಯನ್ನು ತೋರಿಸುವುದಕ್ಕೆ ಆಸ್ಪದವೇ ಇಲ್ಲದಂತೆ ಮಾಡಿಕೊಂಡುಬಿಟ್ಟಿದ್ದಾವೆ. ಎರಡೂ ರಾಜ್ಯಗಳಲ್ಲಿ ಕಾವೇರಿಯ ಪ್ರಸ್ತಾಪವೇ ತೀವ್ರ ಪ್ರತಿಕ್ರಿಯೆಯನ್ನು ಉಂಟುಮಾಡುವ ಪರಿಸ್ಥಿತಿಗೆ ಬಂದುಬಿಟ್ಟಿವೆ. ಈ ವಿವಾದ ಈಗಾಗಲೇ ಚುನಾವಣೆಯ ಸಮಯದಲ್ಲಿ ಉಪಯೋಗಿಸಲ್ಪಡುವ ವಿಷಯವಾಗಿಬಿಟ್ಟಿದೆ - ಅಥವಾ ರಾಜಕಾರಣಿಗಳು ಇದನ್ನು ಅಂಥಾ ವಿಷಯವನ್ನಾಗಿಸಿಬಿಟ್ಟಿದ್ದಾರೆ. ಎರಡೂ ರಾಜ್ಯದಲ್ಲಿ ಎಲ್ಲ ಪಕ್ಷಗಳೂ ಈ ಬಗ್ಗೆ ತೀವ್ರ ನಿಲುವುಗಳನ್ನು ತೆಗೆದುಕೊಂಡುಬಿಟ್ಟಿರುವುದರಿಂದ ಅಧಿಕಾರಕ್ಕೆ ಬಂದ ಯಾವುದೇ ಪಕ್ಷ ತುಸುವಾದರೂ ಸಡಿಲಗೊಂಡರೆ - ಅದು ಆ ಸರಕಾರದ ವೈಫಲ್ಯ ಮತ್ತು ರಾಜ್ಯದ ಆಸಕ್ತಿಗಳನ್ನು ಒತ್ತೆಯಿಟ್ಟಂತೆ ತೋರುವುದರಿಂದ, ಈ ವಿಷಯ ಇನ್ನಷ್ಟು ಜಟಿಲವೂ, ಇತ್ಯರ್ಥ ಮಾಡಲು ಅಸಾಧ್ಯವೂ ಆಗುವ ಮಟ್ಟಕ್ಕೆ ಬಂದುಬಿಟ್ಟಿದೆ.
 

ಆಯೋಗದ ಅಂತಿಮ ತೀರ್ಪು ಬರುವುದು ತಡವಾಗಬಹುದಾದ ಕಾರಣ ತನ್ನ ರಾಜ್ಯದಲ್ಲಿರುವ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಪೂರೈಕೆಯ ಬಗ್ಗೆ ಸ್ವಲ್ಪವಾದರೂ ಭರವಸೆ ಬೇಕು ಎನ್ನುವ ತಮಿಳುನಾಡಿನ ಮನವಿಗೆ ಉತ್ತರವಾಗಿ ೧೯೯೧ರ ಮಧ್ಯಂತರ ಆದೇಶವನ್ನು ಆಯೋಗ ನೀಡಿತು. ಈ ಮಧ್ಯಂತರ ಆದೇಶದ ಪ್ರಕಾರ ಕರ್ನಾಟಕ ಪ್ರತಿವರ್ಷ ೨೦೫ ಟಿಎಂಸಿ ಅಡಿ ಕಾವೇರಿ ನೀರನ್ನು ತಮಿಳುನಾಡಿಗೆ [ಅದರಲ್ಲಿ ೬ ಟಿಎಂಸಿ ಅಡಿ ನೀರು ಪುದುಚ್ಚೇರಿಗಾಗಿ ಕಾದಿರಿಸಲಾಗಿತ್ತು] ಬಿಡಬೇಕೆಂದು ಆದೇಶ ನೀಡಿತು; ಪ್ರತಿತಿಂಗಳೂ ಎಷ್ಟು ನೀರು ಬಿಡಬೇಕೆಂಬ ವಿವರವಾದ ವೇಳಾಪಟ್ಟಿಯನ್ನೂ ಆ ಆದೇಶದಲ್ಲಿ ನೀಡಲಾಗಿತ್ತು.
 

ಅಂತಿಮ ತೀರ್ಪು ನಮೂದಾಗುತ್ತಿದ್ದಂತೆಯೇ ಮಧ್ಯಂತರ ತೀರ್ಪು ರದ್ದಾಗುವುದರಿಂದ, ಇಲ್ಲಿ ಮಧ್ಯಂತರ ಆದೇಶದ ಪೂರ್ವೇತಿಹಾಸಗಳನ್ನು ಚರ್ಚಿಸುವ ಅವಶ್ಯಕತೆಯಿಲ್ಲ. ಆದರೆ ಆ ತೀರ್ಪಿನ ಬಗೆಗಿನ ಮೂರು ಅಂಶಗಳನ್ನು ಇಲ್ಲಿ ಚರ್ಚಿಸುವುದು ಅವಶ್ಯ. ಮೊದಲನೆಯದೆಂದರೆ - ಮುಂಚಿನಿಂದಲೂ ಈ ಮಧ್ಯಂತರ ತೀರ್ಪನ್ನು ಅಮಲುಗೊಳಿಸುವಲ್ಲಿ ಕರ್ನಾಟಕಕ್ಕೆ ಒಲವಿರಲಿಲ್ಲ ಅನ್ನುವುದು. ಎಷ್ಟರಮಟ್ಟಿಗೆ ಈ ರೀತಿಯ ನಿಲುವು ಕರ್ನಾಟಕದ್ದಾಗಿತ್ತೆಂದರೆ ಈ ತೀರ್ಪನ್ನು ಒಂದು ಸುಗ್ರೀವಾಜ್ಞೆಯ ಮೂಲಕ ಅಸಿಂಧುಗೊಳಿಸಲು ಪ್ರಯತ್ನಿಸಿತ್ತು. [ರಾಷ್ಟ್ರಪತಿಗಳ ಅಭಿಪ್ರಾಯಕೋರಿಕೆಯ ಮೇರೆಗೆ ಈ ಸುಗ್ರೀವಾಜ್ಞೆ ಸಂವಿಧಾನಬದ್ಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿತ್ತು]. ಮುಂದಿನ ಘಟ್ಟದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೂ ಕರ್ನಾಟಕ ಉಲ್ಲಂಘಿಸಿ ನ್ಯಾಯಾಲಕ್ಕೆ ಅಗೌರವ ಸಲ್ಲಿಸಿದ ಪ್ರಕರಣವನ್ನೂ ಕರ್ನಾಟಕ ಎದುರಿಸಬೇಕಾಯಿತು. ಎರಡನೆಯದಾಗಿ ಮಧ್ಯಂತರ ತೀರ್ಪು ಕರ್ನಾಟಕದಲ್ಲಿ ಅತೀವ ಆಕ್ರೋಶವನ್ನೂ ಜನಾಗ್ರಹವನ್ನೂ ಉಂಟುಮಾಡಿತು [ಭಾಗಶಃ ಇದನ್ನುಂಟುಮಾಡಲು ಕೆಲ ಶಕ್ತಿಗಳು ಹುನ್ನಾರ ಹೂಡಿದ್ದವೆನ್ನಬಹುದು]. ಈ ಆಕ್ರೋಶ ದುರಂತಮಯ ಹಿಂಸಾಚಾರದತ್ತ ತಿರುಗಿ, ತಮಿಳರ ಮತ್ತು ಕನ್ನಡಿಗರ ನಡುನಿನ ಸಂಬಂಧಗಳನ್ನು ಜಟಿಲಗೊಳಿಸಿತು. ಆ ವಿಪರೀತ ಭಾವ ಕೆಲಕಾಲದ ನಂತರ ತಣ್ಣಗಾಗಿ, ಒಂದು ನಾಜೂಕಾದ ಶಾಂತಿ ನೆಲೆಸಿತ್ತಾದರೂ, ಈಗ ಬಂದಿರುವ ಅಂತಿಮ ತೀರ್ಪು ಹಿಂದಿನದೇ ರೀತಿಯಾದ ಕೋಪ-ರೋಷಗಳನ್ನು ಉಂಟುಮಾಡಿದೆ. ಸದ್ಯಕ್ಕೆ ಈ ನಿಟ್ಟಿನಲ್ಲಿ ಯಾವುದೇ ಹಿಂಸಾಚಾರ ಇನ್ನೂ ನಡೆದಿಲ್ಲ ಅನ್ನುವುದೇ ಸಮಾಧಾನದ ವಿಷಯ. ಈ ಬಗ್ಗೆ ನಾವು ನಂತರ ಚರ್ಚಿಸೋಣ. ಮೂರನೆಯ ಅಂಶವನ್ನು ನಾವು ಈಗ ಕೈಗೆತ್ತಿಕೊಳ್ಳೋಣ. ೧೯೯೦ರಲ್ಲಿ ನಿಂತ ಪೈರನ್ನು ಉಳಿಸಲು ನೀರನ್ನು ಬಿಡಬೇಕೆಂಬ, ಮಧ್ಯಂತರ ತೀರ್ಪನ್ನು ಅನುಷ್ಠಾನಗೊಳಿಸುವ ವಿಷಯ ಮತ್ತೆ ಮತ್ತೆ ಸರ್ವೋಚ್ಚ ನ್ಯಾಯಾಲಯದ ಎದುರು ಬಂದಿತು. ಆ ಆಸಕ್ತಿಕರ ಕಥೆಯನ್ನು ಒಂದು ಕ್ಷಣಕ್ಕೆ ಬಿಡೋಣ. ಆದರೆ ಈ ಬಿಕ್ಕಟ್ಟನ್ನು ಬಗೆಹರಿಸಲು ಕಾವೇರಿ ನದಿ ಪ್ರಾಧಿಕರಣ ಎಂಬ ಒಂದು ಏರ್ಪಾಟನ್ನು ಆಗ ಮಾಡಲಾಯಿತು. ಅದರಿಂದೇನೂ ಉಪಯೋಗವಾಗಲಿಲ್ಲ ಎನ್ನಬೇಕು. ಏನಾದರಾಗಲೀ, ಅಂತಿಮ ತೀರ್ಪು ನಮೂದಾಗಿ ಮಧ್ಯಂತರ ತೀರ್ಪು ಇಲ್ಲದಾದಾಗ, ಆ ಏರ್ಪಾಟೂ ಇಲ್ಲವಾಗುತ್ತದೆ.
 

ಕಾವೇರಿ ಪರಿವಾರ
 

ಈ ವಿವಾದ ಪಡೆದ ಬಗೆಹರಿಯಲಾರದ ರೂಪ, ಪಕ್ಷಗಳ ಅಧಿಕಾರದ ಲೆಕ್ಕಾಚಾರದಿಂದ ಮೇಲಕ್ಕೇಳಲಾಗದ ರಾಜಕೀಯ ವ್ಯವಸ್ಥೆ, ಹಾಗೂ ೧೯೯೨ರ ಹಿಂಸಾಚಾರ - ಈ ಎಲ್ಲವೂ ಸೂಚಿಸಿದ್ದೇನೆಂದರೆ ಹೆಚ್ಚಿನ ವಿಚಾರವಿನಿಮಯದೊಂದಿಗೆ, ಅಧಿಕಾರಶಾಹಿಯ ಚೌಕಟ್ಟಿನ ಹೊರಗೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವ ಪ್ರಯತ್ನವನ್ನು ಮಾಡಬೇಕು ಎಂಬ ವಿಚಾರವನ್ನು. ೧೯೯೦ರ ಪ್ರಾರಂಭದಲ್ಲಿ ಜನರ ಮಟ್ಟದಲ್ಲಿ ಹೆಚ್ಚಿನ ವಿಚಾರವಿನಿಮ ಆಗಬೇಕೆನ್ನುವ ನಿಟ್ಟಿನಲ್ಲಿದಿವಂಗತ ಎಸ್.ಗುಹನ್‍ ಅವರನ್ನೊಳಗೊಂಡಂತೆ ಅನೇಕರರು ಹಲವು ಪ್ರಯತ್ನಗಳನ್ನು ಮಾಡಿ ಜನಪರ ಸಭೆಗಳನ್ನು ಆಯೋಜಿಸಿದರು. ಮೊದಲಿಗೆ ಉತ್ಸಾಹದಿಂದ ಆರಂಭವಾದ ಪ್ರಯತ್ನ ನಂತರದ ದಿನಗಳಲ್ಲಿ ಬೀಳಾಯಿತು. ತದನಂತರ ೨೦೦೧-೦೨ರಲ್ಲಿ ರಾಜಕೀಯದ ಮಟ್ಟದಲ್ಲಿ ಕಾವೇರಿಯ ಬಗ್ಗೆ ಎರಡೂ ರಾಜ್ಯಗಳನಡುವಿನ ಭಿನ್ನಾಭಿಪ್ರಾಯ ಉತ್ತುಂಗಕ್ಕೇರಿದ್ದಾಗ ಜನರೇ ಈ ವಿಷಯದಲ್ಲಿ ಯಾವುದಾದರೂ ಒಂದು ಪರಿಹಾರದತ್ತ ಮುಂದಡಿಯಿಡಬೇಕೆಂದು ಒತ್ತಯಿಸುತ್ತಾ ಈ ಲೇಖಕ ಅನೇಕ ಬರಹಗಳನ್ನು ಬರೆದದ್ದು ಉಂಟು. ಸಾಲದ್ದಕ್ಕೆ, [ಈಗ ದಿವಂಗತರಾಗಿರುವ] ಮಾಜಿ ಮುಖ್ಯನ್ಯಾಯಾಧೀಶರಾಗಿದ್ದ ನಿಟ್ಟೂರು ಶ್ರೀನಿವಾಸರಾಯರ ಮನೆಯಲ್ಲಿ ಒಂದು ಪುಟ್ಟ ಅನೌಪಚಾರಿಕ ಸಭೆಯನ್ನೂ ಆಯೋಜಿಸಿದ್ದೆವು. ಆ ಸಭೆ ಬುದ್ಧಿಜೀವಿಗಳ ಸಭೆಯಾಗಿತ್ತು; ಆದರೆ ಆಗ ಬೇಕಾಗಿದ್ದದ್ದು ರೈತರನ್ನೊಳಗೊಂಡ ಸಭೆ. ಗುಹನ್ ಅವರ ಆಲೋಚನಾಲಹರಿಯನ್ನು ಅಂತರ್ಗತಮಾಡಿಕೊಂಡಿದ್ದ ಮದ್ರಾಸು ವಿಕಾಸಾಧ್ಯಯನ ಸಂಸ್ಥೆ [ಎಂಐಡಿಎಸ್] ಒಳಗೂ ಇಂಥದೇ ವಿಚಾರವಿತ್ತು. ಆ ಸಂಸ್ಥೆಯ ಎಸ್.ಜನಕರಾಜನ್ [ಈ ವಿವಾದದಲ್ಲಿ ಸಿಲುಕಿದ್ದ ಮುಖ್ಯರಾಜ್ಯಗಳಾದ] ತಮಿಳುನಾಡಿನ ಮತ್ತು ಕರ್ನಾಟಕದ ರೈತರನ್ನು ಒಂದೆಡೆ ಸೇರಿಸುವ ಕೆಲಸವನ್ನು ಮಾಡಿದರು. ಇದರಲ್ಲಿ ಸ್ವಲ್ಪ ಸಫಲತೆಯನ್ನು ಕಂಡಹಾಗಾಯಿತು. ಮೊದಲ ಸಭೆಗೆ ಎರಡೂ ರಾಜ್ಯಗಳಿಂದ ಸುಮಾರು ೧೦೦ ಜನ ರೈತರು [ಏಪ್ರಿಲ್ ೨೦೦೩, ಚೆನ್ನೈ], ಕೆಲ ಬುದ್ಧಿಜೀವಿಗಳು, ಎಂಜಿನಿಯರುಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಪತ್ರಕರ್ತರು ಬಂದಿದ್ದರು. ಈ ಸಭೆಯು ಸ್ನೇಹಭಾವದಿಂದ ಕೂಡಿದ್ದು ಕಾವೇರಿ ಪರಿವಾರದ ಪರಿಕಲ್ಪನೆಯ ಉದ್ಭವವಾಯಿತು. ಒಟ್ಟಾರೆ, ಕಾವೇರಿ ಪರಿವಾರದ ರೈತರು ಸ್ನೇಹಭಾವದಿಂದ, ಪರಸ್ಪರ ಸಹಕಾರದಿಂದ, ಸಂದರ್ಭಕ್ಕೆ ತಕ್ಕಂತೆ ಬೇಕಾದ ಎಡ್ಜಸ್ಟ್‌ಮೆಂಟ್ ಮಾಡಿಕೊಳ್ಳುತ್ತಾ ಮುಂದುವರೆಯಬೇಕೆಂಬ ಮಾತಾಯಿತು. ಆನಂತರ ಇದೇ ಭಾವನೆ ಮುಂದುವರೆಯುತ್ತಾ ಬಂದಿದೆ. ಇಬ್ಬದಿಯ ರೈತರು ತಮ್ಮ ನೆರೆರಾಜ್ಯಕ್ಕೆ ಭೇಟಿಯಿತ್ತು ಅಲ್ಲಿನ ದುಃಖ ದುಮ್ಮಾನಗಳನ್ನು ಅರ್ಥಮಾಡಿಕೊಳ್ಳುವ ಯತ್ನ ಮಾಡಿದ್ದಾರೆ. ಇಬ್ಬದಿಯಲ್ಲಿರುವ ಅನುಮಾನಗಳನ್ನು ಪೂರ್ತಿಯಾಗಲ್ಲದಿದ್ದರೂ ಬಹಳಮಟ್ಟಿಗೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ ಕೆಲಸಮಾಡಿದೆ. ಕೊರತೆಯ ಪರಿಸ್ಥಿತಿಯಲ್ಲಿ ನೀರನ್ನು ಹಂಚಿಕೊಳ್ಳುವ ಬಗೆಗೆ ಈ ಪ್ರಕ್ರಿಯೆಯಿಂದ ಪರಿಹಾರ ದೊರೆಯಲಿಲ್ಲವಾದರೂ, ಒಂದು ಪರಿವಾರಭಾವ, ಪರಸ್ಪರ ನಂಬಿಕೆ ಮತ್ತು ಉತ್ತಮ ಸಂಬಂಧಗಳನ್ನು ಎರಡೂ ರಾಜ್ಯಗಳ ಜನರ ನಡುವೆ ಏರ್ಪಾಟಾದದ್ದು ಗಮನಾರ್ಹವಾದ ವಿಷಯ. ಇದು ಒಂದು ದೊಡ್ಡ ಸಾಧನೆ ಎನ್ನಬಹುದಾದರೂ, ಈ ಪರಿವಾರ ಅಂತಿಮ ತೀರ್ಪಿನಿಂದ ಉಂಟಾಗಿರುವ ಪ್ರತಿಕ್ರಿಯೆಗಳ ಭಾವನೆಗಳ ಪೆಟ್ಟನ್ನು ತಡೆದು ಮುಂದಕ್ಕೂ ತನ್ನ ಸಕಾರಾತ್ಮಕವಾದ ಭೂಮಿಕೆಯನ್ನು ನಿರ್ವಹಿಸುತ್ತದೆಂದು ನಾವೆಲ್ಲರೂ ಆಶಿಸಬೇಕಾಗಿದೆ.
 

ಅಂತಿಮ ತೀರ್ಪು
 

ಆಯೋಗ ೫೦ ಪ್ರತಿಶತ ವಿಶ್ವಸನೀಯತೆ [ಇದೇನೆಂದು ಮುಂದೆ ವಿವರಿಸಲಾಗುವುದು] ಯ ಆಧಾರವಾಗಿ ೭೪೦ ಟಿಎಂಸಿ ಅಡಿಯಷ್ಟು ನೀರಿನ ಲಭ್ಯತೆಯಿರುತ್ತದೆ ಅನ್ನುವ ತಳಹದಿಯ ಮೇಲೆ ತನ್ನ ಅಂತಿಮ ತೀರ್ಪನ್ನು ನೀಡಿದೆ. ಈ ನೀರನ್ನು ತಮಿಳುನಾಡಿಗೆ ೪೧೯, ಕರ್ನಾಟಕಕ್ಕೆ ೨೭೦, ಕೇರಳಕ್ಕೆ ೩೦ ಮತ್ತು ಪುದುಚ್ಚೇರಿಗೆ ೭ ಟಿಎಂಸಿ ಅಡಿ ನೀರನ್ನು ನೀಡಿದೆ. ಇನ್ನು ಮಿಕ್ಕದ್ದು ೧೪ಟಿಎಂಸಿ ಅಡಿ ನೀರು. ಅದರಲ್ಲಿ ೧೦ ಟಿಎಂಸಿ ಅಡಿಯನ್ನು ಪರಿಸರದ ಕಾರಣಕ್ಕೆ, ಮತ್ತು ಮಿಕ್ಕ ೪ ಸಮುದ್ರಕ್ಕೆ ಅನಿವಾರ್ಯವಾಗಿ ಹರಿದುಬಿಡುವ ನೀರೆಂದೂ ಪರಿಗಣಿಸಲಾಗಿದೆ. ಕರ್ನಾಟಕ ಬಿಳಿಗುಂಡ್ಲುವಿನಿಂದ ೧೯೨ ಟಿಎಂಸಿ ಅಡಿ ನೀರನ್ನು ಬಿಟ್ಟುಕೊಡಬೇಕು. ಅದರಲ್ಲಿ ೧೦ ಟಿಎಂಸಿ ಅಡಿ ಪರಿಸರಕ್ಕಾಗಿ ಮೀಸಲಾಗಿಡಲಾಗಿದೆ. ಅಂದರೆ ೧೮೨ ಟಿಎಂಸಿ ಅಡಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವುದು. ಈ ನೀರಿನೊಂದಿಗೆ ಬಿಳಿಗುಂಡ್ಲು ಮತ್ತು ಮೆಟ್ಟೂರಿನ ನಡುವೆ ಲಭ್ಯವಾಗುವ ೨೫ ಟಿಎಂಸಿ ಅಡಿ ನೀರನ್ನು ಸೇರಿಸಿದರೆ ಒಟ್ಟಾರೆ ಮೆಟ್ಟೂರಿನಲ್ಲಿ ೨೦೭ ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ. [ತಮಿಳುನಾಡಿಗೆ ನೀಡಿರುವ ೪೧೯ ಟಿಎಂಸಿ ಅಡಿ ನೀರಿಗೂ ಇದಕ್ಕೂ ನಡುವಿನ ಅಂತರದ ನೀರು ಆ ರಾಜ್ಯದಲ್ಲೇ ಲಭ್ಯವಾಗುತ್ತದೆ]. ಮಳೆಯ ಕೊರತೆಯಿರುವ ವರ್ಷಗಳಲ್ಲಿ ಇದೇ ಪರಿಮಾಣಗಳ ಆಧಾರದ ಮೇಲೇ ನೀರನ್ನು ಹಂಚಿಕೊಳ್ಳಬೇಕೆಂದು ಆಯೋಗ ಆದೇಶ ನೀಡಿದೆ. ಒಟ್ಟಾರೆ ಆದೇಶದಲ್ಲಿ ಇದನ್ನು ಅಮಲು ಮಾಡಲು, ತಿಂಗಳುವಾರು ನೀರಿನ ಬಿಡುಗಡೆಯ ವೇಳಾಪಟ್ಟಿಯ ಉಸ್ತುವಾರಿಗೆ ಕಾವೇರಿ ನಿರ್ವಹಣಾ ಮಂಡಲಿಯನ್ನು ಏರ್ಪಾಟು ಮಾಡಬೇಕೆಂದು ಸೂಚಿಸಲಾಗಿದೆ. ಈ ಮಂಡಲಿ ತನ್ನ ಕಮಿಟಿಗಳೊಂದಿಗೆ ಉಸ್ತುವಾರಿ ಕೆಲಸ ಮಾಡುವುದಲ್ಲದೇ ನಿಯಂತ್ರಣಾ ಪ್ರಾಧಿಕಾರವಾಗಿಯೂ ಕೆಲಸ ನಿರ್ವಹಿಸಬೇಕಾಗಿದೆ. [ಕರ್ನಾಟಕದಿಂದ ಬಿಡುಗಡೆಮಾಡಬೇಕಾದ ೧೯೨ ಟಿಎಂಸಿ ಅಡಿಯಲ್ಲಿ ೧೮೨ ಟಿಎಂಸಿ ಅಡಿ ತಮಿಳುನಾಡಿಗೂ, ೧೦ ಟಿಎಂಸಿ ಅಡಿ ಪರಿಸರಕ್ಕೂ ಲೆಕ್ಕ ಹಾಕಿದ್ದರೂ ಸಮುದ್ರಕ್ಕೆ ಅನಿವಾರ್ಯವಾಗಿ ಹರಿಯುವ ೪ ಟಿಎಂಸಿ ಅಡಿಯನ್ನು ಆಯೋಗ ಮರೆತಿದೆ. ಅದನ್ನೂ ಸೇರಿಸಿದರೆ ಕರ್ನಾಟಕದಿಂದ ಹರಿಯಬೇಕಾದ ನೀರು ೧೯೬ ಟಿಎಂಸಿ ಅಡಿ ಮಟ್ಟದಲ್ಲಿದ್ದಿರಬೇಕು].

ವಿಶ್ವಸನೀಯತೆಯ ಮಟ್ಟದ ಆಧಾರ ೫೦ ಪ್ರತಿಶತ ಇರಬೇಕೋ ಅಥವಾ ೭೫ ಪ್ರತಿಶತ ಇರಬೇಕೋ ಅನ್ನುವುದರ ಬಗ್ಗೆ ಎಂಜಿನಿಯರುಗಳಲ್ಲೇ ಭಿನ್ನಾಭಿಪ್ರಾಯವಿದೆ. ೫೦ ಪ್ರತಿಶತ [ಅಥವಾ ೭೫ ಪ್ರತಿಶತ] ವಿಶ್ವಸನೀಯತೆಯ ಹರಿವು ಅಂದರೆ ನೂರು ವರ್ಷಗಳಲ್ಲಿ ೫೦ [ಅಥವಾ ೭೫] ವರ್ಷಗಳಲ್ಲಿ ನಮೂದಿಸಿದ ಮಟ್ಟಕ್ಕೆ ಸಮನಾಗಿ ಅಥವಾ ಅದಕ್ಕಿಂತ ಹೆಚ್ಚಾಗಿ ನೀರಿನ ಹರಿವು ಇರುತ್ತದೆ ಅನ್ನುವ ವಿಶ್ವಾಸ. ಈ ಮಟ್ಟ ೫೦ ಪ್ರತಿಶತವಾದರೂ ೭೫ ಪ್ರತಿಶತವಾದರೂ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ. ಯಾವರಾಜ್ಯಕ್ಕೆ ಎಷ್ಟು ನೀರೆಂಬುದು ಯಾವುದಾದರೂ ಸಂಖ್ಯೆಯಾಧಾರದ ಮೇಲಿರಬೇಕಾದ್ದರಿಂದ ಈ ಸಂಖ್ಯಯನ್ನು ಉಪಯೋಗಿಸಲ್ಪಟ್ಟಿದೆ. [ಆದರೆ ಈ ಸಂಖ್ಯೆಗಿಂತ ಕಡಿಮೆ ಮಟ್ಟದ ನೀರು ಲಭ್ಯವಿರುವಾಗ ಯಾವರೀತಿ ಹಂಚಿಕೆಯಾಗಬೇಕೆಂಬ ನಿಯಮವಂತೂ ಇರಲೇ ಬೇಕು.]

ಆದೇಶಕ್ಕೆ ಬಂದ ಪ್ರತಿಕ್ರಿಯೆಗಳು 

ಈ ಆದೇಶದ ಬಗ್ಗೆ ಕರ್ನಾಟಕದಲ್ಲಿ ತೀವ್ರ ಅಸಮಾಧಾನ ಎಲ್ಲ ದಿಕ್ಕುಗಳಿಂದಲೂ ಬಂದಿದೆ. ಎಲ್ಲರೂ ಈ ಆದೇಶ ಅನ್ಯಾಯದ್ದು ಅನ್ನುತ್ತಿದ್ದಾರೆ. ಕೆಲವರು ಇದನ್ನು ಪೂರ್ವಾಗ್ರಹ ಪೀಡಿತ ಅಂತಲೂ ವಿವರಿಸಿದ್ದಾರೆ. ಈ ಆದೇಶವನ್ನು ತಿರಸ್ಕರಿಸುವ ಮಾತುಗಳೂ ಕೇಳಿಬಂದಿವೆ. ತಮಿಳುನಾಡಿನಲ್ಲಿ ಈ ಆದೇಶವನ್ನು ಹೆಚ್ಚಿನಷ್ಟು ಜನ ಸ್ವಾಗತಿಸಿದ್ದಾರಾದರೂ, ಕೆಲವರು ಅಪಸ್ವರ ಹಾಡಿದ್ದಾರೆ. ಮಿಕ್ಕ ಪಕ್ಷಗಳಲ್ಲದೇ, ಮೊದಲಿಗೆ ಈ ಆದೇಶವನ್ನು ಸ್ವಾಗತಿಸಿದ ದ್ರಾವಿಡ ಮುನ್ನೇಟ್ರ ಕಳಗಂ [ಡಿಎಂಕೆ] ಸರಕಾರವೂ ಆದೇಶದಲ್ಲಿ ಕೆಲವು "ಅಂಶ"ಗಳ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟೀಕರಣ ಬೇಕೆಂದು ಹೇಳಿದೆ. ಕೇರಳದಲ್ಲೂ ಆ ರಾಜ್ಯಕ್ಕೆ ನೀಡಿರುವ ನೀರಿನ ಪ್ರಮಾಣ ಕಡಿಮೆ ಅನ್ನುವ ಅಭಿಪ್ರಾಯವಿದೆ. ಪುದುಚ್ಚೇರಿಯನ್ನು ಬಿಟ್ಟು ಮಿಕ್ಕ ಎಲ್ಲ ರಾಜ್ಯಗಳೂ ಈ ತೀರ್ಪನ್ನು ಪುನರ್ವಿಮರ್ಶಿಸಲು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಕೆ ನೀಡಿವೆ. ಕೆಲ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿವೆ. ಈ ಎಲ್ಲ ವಿಚಾರಗಳ ಬಗ್ಗೆ ಉದ್ಭವಿಸಿರುವ ವಿಚಾರಗಳನ್ನು ಪ್ರಶ್ನೋತ್ತರದ ರೀತಿಯಲ್ಲಿ ಕೆಳಗೆ ಚರ್ಚಿಸಲಾಗಿದೆ.
 

ಪ್ರಶ್ನೆ ೧. ತೀರ್ಪನ್ನು ಸ್ವೀಕರಿಸುವ/ನಿರಾಕರಿಸುವುದಕ್ಕೆ ಆಸ್ಪದವಿದೆಯೇ?
 
ಉ. ಕಾನೂನು ಬದ್ಧವಾಗಿ ಈ ಆಯ್ಕೆ ಇಲ್ಲ. ಈ ಆದೇಶ ಕಾನೂನು ಸಂಹಿತೆಯ ಪ್ರಕಾರ - ಅಂತರರಾಜ್ಯ ಜಲವಿವಾದಗಳ ಕಾಯಿದೆ ೧೯೫೬ ಮತ್ತು ಅದಕ್ಕೆ ೧೯೯೨ರಲ್ಲಿ ಮಾಡಿದ ತಿದ್ದುಪಡಿಯನ್ವಯ - ಅಂತಿಮ ಮತ್ತು ಬದ್ಧ ತೀರ್ಪಾಗಿ ನೀಡಲಾಗಿದೆ. ಅದಕ್ಕೆ ಸರ್ವೋಚ್ಚನ್ಯಾಯಾಲಯದ ಆದೇಶದಷ್ಟೇ ಬದ್ಧತೆಯಿದೆ.


ಪ್ರಶ್ನೆ ೨. "ಪುನಃ ಪರಿಶೀಲನೆಯ ಮನವಿ" ಸಲ್ಲಿಸಲು ಆಸ್ಪದವಿದೆಯೇ? 
ಉ. ಅಂತರರಾಜ್ಯ ಜಲವಿವಾದಗಳ ಕಾಯಿದೆಯನ್ವಯ ಪುನಃ ಪರಿಶೀಲನೆಗೆ ಆಸ್ಪದವಿಲ್ಲ. ಆದರೆ, [ಆ ಕಾನೂನಿನಂತೆ] ಈ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶದಷ್ಟೇ ಬದ್ಧತೆಯಿದೆ ಎನ್ನುವುದಾದರೆ, ಸರ್ವೋಚ್ಚನ್ಯಾಯಾಲಯಗಳ ಆದೇಶಗಳಿಗಿರುವಂತೆಯೇ ಈ ಆದೇಶಕ್ಕೂ ಪುನಃಪರಿಶೀಲನೆಯ ಸಾಧ್ಯತೆಯಿರಬಹುದು. ಅದೇನೇ ಇದ್ದರೂ ಜಲವಿವಾದಗಳ ಕಾಯಿದೆಯನ್ವಯ ಕೇಂದ್ರ ಸರಕಾರಕ್ಕಾಗಲೀ, ಆಯಾ ರಾಜ್ಯ ಸರಕಾರಗಳಿಗಾಗಲೀ ಈ ಆದೇಶದ ಯಾವುದೇ ಅಂಶದ ಬಗ್ಗೆ "ವಿವರಣೆ, ಅಥವಾ ಮೊದಲು ಆಯೋಗದ ದೃಷ್ಟಿಗೆ ಬಂದಿರದ ವಿಷಯಗಳ ಬಗೆಗೆ ಮಾರ್ಗದರ್ಶನ ಬೇಕೆನ್ನಿಸಿದರೆ" ಅದನ್ನ ಮೂರು ತಿಂಗಳುಗಳೊಳಗಾಗಿ ಆಯೋಗದ ದೃಷ್ಟಿಗೆ ತರಬಹುದಾಗಿದೆ. ಇದು ಪುನಃಪರಿಶೀಲನೆಗೆ ಕೊಟ್ಟಿರುವ ಸಾಧ್ಯತೆ ಅಲ್ಲವೆಂಬುದನ್ನು ಗಮನಿಸಬೇಕು. ಆದರೆ ರಾಜ್ಯ ಸರಕಾರಗಳನ್ನು ಈ ಪದಪ್ರಯೋಗದ ಒಳಸುಳಿಗಳು ಬಂಧಿಸಿಡುವ ಸಾಧ್ಯತೆಗಳು ಬಹಳ ಕಡಿಮೆ. ರಾಜ್ಯಸರಕಾರಗಳು ಎಲ್ಲ ರೀತಿಯ ಅನುಮಾನಗಳನ್ನೂ, ಅಸಮಾಧಾನಗಳನ್ನೂ, ಪೀಡೆಗಳನ್ನೂ ಮತ್ತೆ ಆಯೋಗಕ್ಕೆ ಮನವಿಯ ರೂಪದಲ್ಲಿ ಸಲ್ಲಿಸಿ, ವಿವರಣೆ ಯಾಚಿಸುವ ಪ್ರಕ್ರಿಯೆಯನ್ನು ಪುನಃಪರಿಶೀಲನೆಯಾಗಿ ಮಾರ್ಪಡಿಸಿಬಿಡುತ್ತವೆ. ಆಯೋಗವೂ ಈ ಎಲ್ಲ ವಿಚಾರಗಳ ಬಗ್ಗೆ ಸಾಕಷ್ಟು ತಾಳ್ಮೆಯಿಂದ ಮರುಪರಿಶೀಲನೆ ಮಾಡಬೇಕಾಗುತ್ತದೆ. ಈ ಉತ್ತರಗಳನ್ನು ಆಯೋಗ ತ್ವರಿತಗತಿಯಲ್ಲಿ ನೀಡಿ ಈ ತೀರ್ಪನ್ನು ಕೇಂದ್ರ ಸರಕಾರ ಆ ತಕ್ಷಣ ಯಾವ ಕಾಲಹರಣವನ್ನೂ ಮಾಡದೇ ಗೆಜೆಟ್ಟಿನಲ್ಲಿ ಪ್ರಕಟಿಸುತ್ತದೆಂದು ಆಶಿಸಬೇಕಾಗಿದೆ.

ಪ್ರಶ್ನೆ ೩. ಸರ್ವೋಚ್ಚ ನ್ಯಾಯಾಲಯದ ಬಾಗಿಲುಗಳನ್ನು ತಟ್ಟುವ ಅವಕಾಶವಿದೆಯೇ? 
ಉ. ಕರಾರುವಾಕ್ಕಾಗಿ ನೋಡಿದರೆ ಇದಕ್ಕೆ ಉತ್ತರ "ಇಲ್ಲ" ಎಂದೇ ಹೇಳಬೇಕಾಗುತ್ತದೆ. ಸಂವಿಧಾನದ ೨೬೨ರ ಕಲಮಿನ ನಿಬಂಧನೆಯ ಪ್ರಕಾರ ಮತ್ತು ಜಲವಿವಾದಗಳ ಕಾಯಿದೆ ೧೯೫೬ರ ಅನ್ವಯ ವಿವಾದವನ್ನು ಆಯೋಗಕ್ಕೆ ಅರ್ಪಿಸಿದ ನಂತರ ಅದರಲ್ಲಿ ಹಸ್ತಕ್ಷೇಪ ಮಾಡಲು [ಸರ್ವೋಚ್ಚ ನ್ಯಾಯಾಲಯವನ್ನೊಳಗೊಂಡು] ಯಾವುದೇ ನ್ಯಾಯಾಲಯಕ್ಕೆ ಹಕ್ಕಿಲ್ಲ. ಅನೇಕ ವರ್ಷಗಳಿಂದ ಈ ಲೇಖಕ ಈ ರೀತಿಯಾದ - ಮರುಪರಿಶೀಲನೆಗೆ ಆಸ್ಪದವಿಲ್ಲದ ವ್ಯವಸ್ಥೆಯಿಂದ ರಾಜ್ಯಗಳಿಗೆ ಅಸಮಾಧಾನವಾಗಬಹುದೆಂಬ ವಿಚಾರವನ್ನು ಚರ್ಚಿಸಿರುವುದಿದೆ - ಈಗ ಆಗಿರುವುದೂ ಅದೇ. ಸರ್ವೋಚ್ಚ ನ್ಯಾಯಾಲಯ ಇದನ್ನು ಮರುಪರಿಶೀಲಿಸುವ ಹಕ್ಕನ್ನು ಕಾಯ್ದಿಡಬೇಕು ಎಂಬ ಸಲಹೆಯನ್ನು ಯಾರೂ ಪರಿಗಣಿಸಿಲ್ಲ. ಈಗಿನ ಕಾಯಿದೆಯನ್ವಯ [ಈ ಲೇಖಕ ಅರ್ಥೈಸಿರುವಂತೆ] ಈಗ ನೀಡಿರುವ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಕ್ಕೆ ಆಸ್ಪದವಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ತಟ್ಟುವುದರಿಂದ ಯಾರನ್ನೂ ತಡೆಯಲು ಸಾಧ್ಯವಿಲ್ಲ. ಹಾಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಅದನ್ನು ಸ್ವೀಕರಿಸಬೇಕೋ, ವಿಚಾರಣೆ ನಡೆಸಬೇಕೋ ಎನ್ನುವುದರ ಬಗ್ಗೆ ನ್ಯಾಯಾಲಯವೇ ಒಂದು ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಸಂವಿಧಾನದ ೨೬೨ನೇ ಕಲಮು ಮತ್ತು ಜಲವಿವಾದಗಳ ಕಾಯಿದೆಯನ್ನು ಓದಿದಾಗ, ಇಂಥಹ ಮನವಿಯನ್ನು ಯಾವ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯ ಸ್ವೀಕರಿಸಬಹುದು ಅನ್ನುವುದು ಸ್ಪಷ್ಟವಾಗಿಲ್ಲ. ಆದರೆ ಸಂವಿಧಾನದ ಇತರ ಕಲಮುಗಳ ಅನ್ವಯ - ಕಾಯಿದೆಯಲ್ಲಿ ನ್ಯಾಯಾಲಯಕ್ಕೆ ಮರುಪರಿಶೀಲನೆಯ ಹಕ್ಕಿಗಿರುವ ಅಡ್ಡಗೋಡೆಯನ್ನು - ಸರ್ವೋಚ್ಚ ನ್ಯಾಯಾಲಯ ದಾಟಬಹುದೆಂದು ಕೆಲ ಕಾನೂನ ತಜ್ಞರ ಅಭಿಪ್ರಾಯವಾಗಿದೆ. ಈ ಬಗ್ಗೆ ಹೆಚ್ಚಿನ ಅಭಿಪ್ರಾಯವನ್ನು ನೀಡಲು ಈ ಲೇಖಕನಿಗೆ ಸಾಧ್ಯವಿಲ್ಲ.

ಪ್ರಶ್ನೆ ೪. ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ನುವ ಭಾವನೆಯಲ್ಲಿ ಹುರುಳಿದೆಯೇ? 
ಉ. ಈ ಭಾವನೆ ಐತಿಹಾಸಿಕ ಕಾರಣಗಳಿಗಾಗಿ ಕರ್ನಾಟಕದ ಜನತೆಯ ಮನಃಪಟಲದಲ್ಲಿ ಮನೆಮಾಡಿದೆ. ಬಹಳ ಕಾಲದಿಂದಲೂ ೧೮೯೨ರ ಮತ್ತು ೧೯೨೪ರ ಮದ್ರಾಸು ಸರಕಾರ ಮತ್ತು ಮೈಸೂರು ಸಂಸ್ಥಾನ ಗಳ ನಡುವಿನ ಒಪ್ಪಂದಗಳಲ್ಲಿ - ಮದ್ರಾಸು ಸರಕಾರ ನ್ಯಾಯಸಮ್ಮತವಲ್ಲದ ಹೇರಿಕೆಗಳನ್ನು ಸಂಸ್ಥಾನದ ಮೇಲೆ ತಳ್ಳಿದೆ ಅನ್ನುವ ಭಾವನೆ ಇದೆ. ಈ ಭಾವನೆ ಸರಿಯೋ ತಪ್ಪೋ ಗೊತ್ತಿಲ್ಲವಾದರೂ ಅದರಲ್ಲಿ ಹುರುಳಿದೆ. ೧೯೨೪ರ ಒಪ್ಪಂದ ಕೃಷ್ಣರಾಜಸಾಗರ [ಮತ್ತು ಮೆಟ್ಟೂರು] ಅಣೆಕಟ್ಟುಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿತಾದರೂ, ಅಲ್ಲಿಂದ ಮುಂದಕ್ಕೆ ಆಯಾ ರಾಜ್ಯಗಳಲ್ಲಿ ನೀರಾವರಿಯಡಿಯಲ್ಲಿ ಬರಬಹುದಾದ ಪ್ರದೇಶಗಳ ಮೇಲೆ ಪರಿಮಿತಿಗಳನ್ನೂಡ್ಡಿತ್ತು. ಈ ಪರಿಮಿತಿಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತಮಗೆ ಅನ್ಯಾಯವಾಗಿದೆ ಅನ್ನುವ ಭಾವನೆ ನೆಲೆಮಾಡಿಕೊಂಡಿದೆ. ಆದರೆ ಒಂದು ಕಾಲಕ್ಕೆ ಆ ಭಾವನೆ ಸಕಾರಣವಾಗಿದ್ದೆನಿಸಿದ್ದರೂ ಇಂದಿಗೆ ಅದರ ಪ್ರಸ್ತುತತೆ ಇಲ್ಲ. ಎರಡೂ ರಾಜ್ಯಗಳು ಒಪ್ಪಂದಕ್ಕಿಂತ ಹೆಚ್ಚಾದ ಜಮೀನನ್ನು ನೀರಾವರಿಯಡಿ ತಂದಿದ್ದಲ್ಲದೆ, ಕರ್ನಾಟಕ ಕಬಿನಿ, ಹೇಮಾವತಿಯಂತಹ ಅಣೆಕಟ್ಟುಗಳನ್ನು ನಿರ್ಮಿಸಿಬಿಟ್ಟಿತು. ಈ ಮೂಲಕ ಕರ್ನಾಟಕಕ್ಕೆ ಕಾವೇರಿಯ ನೀರಿನ ಮೇಲೆ ಹೆಚ್ಚಿನ ಹತೋಟಿ ದೊರೆತು ಮುಂಚಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಹೀಗಾಗಿ ಅಲ್ಲಿಂದ ಮುಂದಕ್ಕೆ ಕರ್ನಾಟಕಕ್ಕೆ ಬೇಗುದಿ ಪಡಲು ಯಾವ ಕಾರಣವೂ ಇಲ್ಲದಾಯಿತು. ಈ ಪರಿಸ್ಥಿತಿಯಲ್ಲಿ ಕಾವೇರಿ ನೀರಿನ ಬಗ್ಗೆ ಶಂಕೆಯಿಂದಾಗಿ [ಸಕಾರಣವೋ ಅಲ್ಲವೋ ತಿಳಿಯದಾದರೂ] ಅತೃಪ್ತಿಗೆ ಒಳಗಾಗಿದ್ದು ತಮಿಳುನಾಡು. ಈ ಮಾತು ಚಾರಿತ್ರಿಕವಾದ ಹಿನ್ನೆಲೆಯನ್ನು ಕೊಡುವುದಕ್ಕಾಗಿ ಈ ಲೇಖಕ ಹೇಳುತ್ತಿದ್ದಾನೆಯೇ ಹೊರತು ಆ ಬಗ್ಗೆ ಯಾವ ನಿಲುವನ್ನೂ ತೆಗೆದುಕೊಳ್ಳುತ್ತಿಲ್ಲ.
 

ವರ್ತಮಾನಕ್ಕೆ ಬಂದರೆ ತಮಿಳುನಾಡು ಮತ್ತು ಕರ್ನಾಟಕ [ಕೇರಳ ಮತ್ತು ಪುದುಚ್ಚೇರಿಯ ಬಗ್ಗೆಗೂ ಇದು ಅನ್ವಯವಾಗುತ್ತದೆ] ಆಯೋಗದ ಮುಂದೆ ತಮ್ಮ ತಗಾದೆಯನ್ನು ಒಯ್ದರು. ಎರಡೂ ರಾಜ್ಯಗಳು ಮತ್ತೊಂದಕ್ಕಿಂತ ಶಕ್ತಿಶಾಲಿಯಾಗಿ ಇರಲೂ ಇಲ್ಲ, ತಮ್ಮ ದೃಕ್ಪಥವನ್ನು ಮತ್ತೊಂದು ರಾಜ್ಯದ ಮೇಲೆ ಹೇರಿ ಒಪ್ಪಿಸಲೂ ಸಾಧ್ಯವಾಗಲಿಲ್ಲ. ಆಯೋಗ ಒಂದು ಕಾನೂನು ಬದ್ಧ ಏರ್ಪಾಟಾಗಿದ್ದು ಅದರ ಅಧಿಕಾರವನ್ನು ಸಂವಿಧಾನದ ಕಲಮಿನಡಿಯಲ್ಲಿ ಅದು ಪಡೆದಿತ್ತು. ಆಯೋಗದಲ್ಲಿ ಮೂವರು ನ್ಯಾಯಮೂರ್ತಿಗಳಿದ್ದರು [ಇವರಲ್ಲಿ ಯಾರೂ ವಿವಾದದ ಯಾವುದೇ ರಾಜ್ಯಕ್ಕೆ ಸೇರಿದವರಲ್ಲ]. ನ್ಯಾಯ ಮೂರ್ತಿಗಳು ಯಾವುದೇ ಒಂದು ರಾಜ್ಯದತ್ತ ಒಲವು ತೋರಿ ಮತ್ತೊಂದು ರಾಜ್ಯದ ವಿರುದ್ಧದ ನಿಲುವನ್ನು ತೆಗೆದುಕೊಳ್ಳಲು ಯಾವುದೇ ಕಾರಣಗಳಿರಲಿಲ್ಲ. ಅಲ್ಲದೇ ನ್ಯಾಯವನ್ನೊದಗಿಸಲೆಂದೇ ಏರ್ಪಾಟಾದ ಈ ಆಯೋಗ ಅನ್ಯಾಯವೆಸಗಲು ಕಾರಣವೂ ಕಾಣಿಸುತ್ತಿಲ್ಲ. ಹೀಗಾಗಿ ಆಯೋಗ ಪೂರ್ವಾಗ್ರಹ ಪೀಡಿತವಾಗಿತ್ತು ಅನ್ನುವ ಆರೋಪವನ್ನು ಪರಿಗಣಿಸಲು ಆಗುವುದಿಲ್ಲ. ಆಯೋಗದ ಅಂತಿಮ ತೀರ್ಮಾನ ನ್ಯಾಯಸಮ್ಮತವಾದ ಮಾರ್ಗದಲ್ಲಿ, ಎಲ್ಲ ಅಂಶಗಳನ್ನೂ ಪರಿಗಣಿಸಿ ನೀಡಿರುವುದರಿಂದ - ತಕ್ಷಣಕ್ಕೆ ಇದು ಎಲ್ಲರಿಗೂ ನ್ಯಾಯವನ್ನೊದಗಿಸಿದೆ ಎನ್ನುವುದನ್ನು ಮೂಲಭೂತವಾಗಿ ಒಪ್ಪಿ ನಾವು ಮುಂದುವರೆಯಬೇಕಿದೆ. ತಗಾದೆಯ ವಾದವಿವಾದಗಳು ನಡೆದ ದೀರ್ಘಕಾಲದಲ್ಲಿ ನಾಲ್ಕೂ ರಾಜ್ಯ ಸರಕಾರಗಳು ತಮ್ಮ ವಾದವಿವಾದಗಳನ್ನು ಮಂಡಿಸಲು ಸರ್ವರೀತಿಯಾದ ಪ್ರಯತ್ನಗಳನ್ನೂ ಮಾಡಿದುವು. ಘಟಾನುಘಟಿಗಳಾದ ನಿಪುಣರನ್ನು ಸಲಹೆ ಕೇಳಿದರು, ದೊಡ್ಡ ವಕೀಲರನ್ನು ತಮ್ಮ ಪರ ವಾದ ಮಾಡಲು ನಿಲ್ಲಿಸಿದರು, ಆದಷ್ಟು ಹೆಚ್ಚು ದಸ್ತಾವೇಜುಗಳನ್ನು ಮಂಡಿಸಿದರು. ಯಾವುದೇ ರಾಜ್ಯ ತಮ್ಮ ವಾದವನ್ನು ಆಯೋಗ ಸರಿಯಾಗಿ ಕೇಳಲಿಲ್ಲ - ಅಲ್ಲಿ ಅನ್ಯಾಯವಾಗಿದೆ ಅನ್ನುವುದಕ್ಕೆ ಆಸ್ಪದವೇ ಇಲ್ಲ. ಆದರೆ ನ್ಯಾಯಮೂರ್ತಿಗಳೂ ಒಮ್ಮೊಮ್ಮೆ ತಪ್ಪು ಮಾಡಬಹುದು. ಹಾಗೆ ಮಾಡಿದರೆ ವ್ಯಾಜ್ಯ ಮಾಡುತ್ತಿರುವ ಕೆಲವರಿಗೆ ಅನ್ಯಾಯವಾದ ಭಾವನೆ ಉಂಟಾಗುವುದೂ ಸಹಜವೇ. ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ನುವ ಅನೇಕರ ದೃಷ್ಟಿ ನಿಜವೇ ಎಂದು ಪರಿಗಣಿಸಿದರೆ, ಆಯೋಗ ತಪ್ಪಾದ ತೀರ್ಮಾನವನ್ನು ನೀಡಿದೆ, ಅದರಿಂದ ಆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ನಾವು ಪರಿಗಣಿಸಲು ಸಾಧ್ಯವಿದೆ. ಅದೇ ನಿಜವಾದಲ್ಲಿ ಅದಕ್ಕೆ ಒಂದು ಮಾರ್ಗವಂತೂ ಇದ್ದೇ ಇದೆ: ಮೊದಲೇ ಹೇಳಿದಂತೆ ಮೂರು ತಿಂಗಳುಗಳೊಳಗಾಗಿ ಈ ಅನುಮಾನಗಳನ್ನು ತಿಳಿಸುತ್ತಾ ಆಯೋಗಕ್ಕೆ ಮನವಿಪತ್ರವನ್ನು ಆ ರಾಜ್ಯ ಸಲ್ಲಿಸಬಹುದು.
 

ಪ್ರ ೫. ಕರ್ನಾಟಕದಲ್ಲಿ ನಡೆಯುತ್ತಿರುವ ನಿರಸನ ಸರಿಯೇ?
 
ಉ. ಸರ್ವೋಚ್ಚ ನ್ಯಾಯಾಲಯದ ಯಾವುದೇ ತೀರ್ಮಾನವನ್ನು ನಾವು ಟೀಕಿಸಬಹುದು. ಅದೇ ವಾದಸರಣಿಯಲ್ಲಿ ಆಯೋಗದ ಆದೇಶವನ್ನೂ ನಾವು ಟೀಕಿಸಬಹುದು. ಆದರೆ ಈ ಟೀಕೆ ಕಾನೂನಿನ ಚೌಕಟ್ಟಿನೊಳಗೆ, ಸಂವಿಧಾನಕ್ಕೆ ಮತ್ತು ಅನೇಕ ರಾಜ್ಯಗಳಿರುವ ನಮ್ಮ ರಾಷ್ಟ್ರದ ಸಂಯುಕ್ತ ತತ್ವಕ್ಕೆ ಒಳಪಟ್ಟು ಇರಬೇಕಾದದ್ದು ಅವಶ್ಯಕ. ಕರ್ನಾಟಕದಲ್ಲಿ ಆಗಿರುವ ಈಚಿನ ಕೆಲ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗುತ್ತದೆ. ಬಂದ್ ಕರೆದು ಎಲ್ಲ ಕೆಲಸಗಳನ್ನೂ ತಡೆಗಟ್ಟುವುದು, ತೀರ್ಪನ್ನು ನಿರಾಕರಿಸುವುದಕ್ಕೆ ಕರೆ ನೀಡುವುದೂ ಸಮಂಜಸ ಅನ್ನಿಸುವಂತಹ ಕ್ರಿಯಗಳಲ್ಲ. ಸತ್ಯಾಗ್ರಹ, ನಿರಶನ ಸರಿ, ಆದರೆ ಜನಜೀವನ ಅಸ್ತವ್ಯಸ್ತಗೊಳಿಸುವಂತಹದ್ದೇನನ್ನೂ ಮಾಡಬಾರದು. ಬಂದ್ ಶಾಂತಿಯುತವಾಗಿತ್ತು ಅಂದರೂ, ಅದು ಜನಜೀವನಕ್ಕೆ ಅಡ್ಡಿಯುಂಟುಮಾಡಿದ್ದರಿಂದ ಹಿಂಸಾತ್ಮಕವಾದದ್ದು. ತಮಿಳು ಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲು ಕರೆ ನೀಡವುದು ಸರಿಯೇ? ಕರ್ನಾಟಕದ ವ್ಯಾಜ್ಯವಿರುವುದು ಆಯೋಗದ ತೀರ್ಪಿನ ಮೇಲೇ ವಿನಃ ಆಯೋಗದ ಮುಂದೆ ಕರ್ನಾಟಕದಂತೆಯೇ ಅಹವಾಲು ಅರ್ಪಿಸಿ ನಿಂತಿದ್ದ ತಮಿಳುನಾಡು ಸರಕಾರದ ಜೊತೆಗಲ್ಲ. ತಮಿಳು ಜನರ ವಿರುದ್ಧವಂತೂ ಅಲ್ಲವೇ ಅಲ್ಲ. ಆದರೆ ದುರಂತವೆಂದರೆ ಜನರನ್ನು ಈ ಬಗ್ಗೆ ಎಚ್ಚರಗೊಳಿಸುವುದಕ್ಕೆ ಬದಲಾಗಿ ನಾಯಕರು ರಾಜಕೀಯಕಾರಣಗಳಿಗಾಗಿ ತಪ್ಪುದಾರಿ ಹಿಡಿಸಿ ರೊಚ್ಚಿಗೆಬ್ಬಿಸುತ್ತಿದ್ದಾರೆ. ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಕೃಷ್ಣ ಸರ್ವೂಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಇಂತಹ ಕೆಲಸವನ್ನು ಮಾಡಿದ್ದರು. ಈಗ ಕರ್ನಾಟಕದ ಓರ್ವ ಮಂತ್ರಿ ತನ್ನ ಕಾರನ್ನು ಜನ ಮಂಡ್ಯದಲ್ಲಿ ನಿಲ್ಲಿಸಿದಾಗ ಹೊರಬಂದು ಜನರಿಗೆ ತಿಳಿಹೇಳುವುದನ್ನು ಬಿಟ್ಟು ಅವರೊಂದಿಗೇ ನಿರಶನದಲ್ಲಿ ಭಾಗಿಯಾಗಿದ್ದಾರೆ. ಆಯೋಗದ ತೀರ್ಪು "ಸಾರಾಸಗಟು ಏಕಪಕ್ಷವಾದದ್ದು, ಪೂರ್ವಾಗ್ರಹದಿಂದ ಕೂಡಿದ್ದು, ನಿರಂಕುಶವಾದದ್ದು" ಎಂದು ಬಣ್ಣಿಸಿದ ದೇಶದ ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರ ಮಾತುಗಳು ಅದಕ್ಕಿಂತಲೂ ಪ್ರಶ್ನಾರ್ಹವಾದ ಕ್ರಿಯೆ ಎನ್ನಬಹುದು. ಹೀಗೆ ಬಿದ್ದಬೆಂಕಿಯನ್ನು ನಂದಿಸುವುದಕ್ಕೆ ಬದಲು ಅದಕ್ಕೆ ಇನ್ನಷ್ಟು ತುಪ್ಪ ಸುರಿದು "ಪಾಕೃತಿಕ ಸಂಪನ್ಮೂಲಗಳ ಜೊತೆಗೆ ರಾಜಕೀಯ ಮಾಡುವ ಲಕ್ಷಣಗಳು" "ದೇಶದ ಐಕ್ಯತೆ" ಗೆ ಒದಗಿರುವ ಅಪಾಯ, "ರಾಜ್ಯಗಳ ನಡುವಿನ ವಿವಾದಗಳನ್ನು ಪರಿಹರಿಸುವ ಆಯೋಗಗಳಂತಹ ಸಂಸ್ಥೆಗಳು ಕಳೆದುಕೊಳ್ಳುತ್ತಿರುವ ನಂಬಿಕೆ" ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಅವರ ಕಪಟ ಸೋಗಿನ ಮಾತುಗಳಲ್ಲಿರುವ ವಿಡಂಬನೆಯನ್ನು ಜನರು ಗಮನಿಸಿಯೇ ಇರುತ್ತಾರೆ. ಕಾನೂನನ್ನು ಬಲ್ಲ ಸಂವಿಧಾನವನ್ನೂ ಅರ್ಥಮಾಡಿಕೊಂಡಿರುವ ವಕೀಲರೂ ನ್ಯಾಯಾಲಯಗಳನ್ನು ಬಿಟ್ಟು ಬೀದಿಗಿಳಿದಿರುವುದು ಸೋಜಿಗದ ಮಾತೇ ಸರಿ. ಅವರುಗಳ ನಡುವಿನಲ್ಲಿನ ಹಿರಿಯರು ಯಾರೂ ಅವರಿಗೆ ತಾವು ಮಾಡುತ್ತಿರುವ ಅಸಮಂಜಸ ಕೃತ್ಯದಬಗ್ಗೆ ಬುದ್ಧಿಮಾತು ಹೇಳಲಿಲ್ಲವೇ? ಆಯೋಗದ ತೀರ್ಪಿನ ಬಗ್ಗೆ ತಮಿಳುನಾಡಿನಲ್ಲಿ ಇಷ್ಟೇ ಅಸಮಾಧಾನವಿದ್ದಿದ್ದರೆ, ಇಂಥದೇ ಕೃತ್ಯಗಳು ತಮಿಳುನಾಡಿನಲ್ಲೂ ಆಗುವ ಸಾಧ್ಯತೆ ಇತ್ತು ಎಂದು ಹೇಳುವುದರಲ್ಲಿ ಅತಿರೇಕವೇನೂ ಇಲ್ಲ. ಈಗಾಗಲೇ ಜಯಲಲಿತಾ ಕೆಲ ಜವಾಬ್ದಾರಿರಹಿತ ಮಾತುಗಳನ್ನಾಡಿಬಿಟ್ಟಿದ್ದಾರೆ.

ದೇವೇಗೌಡ ಮತ್ತು ಕರ್ನಾಟಕದ ವಕೀಲರು, ಈ ತೀರ್ಪು ಕರ್ನಾಟಕಕ್ಕೆ ಅನ್ಯಾಯ ಉಂಟುಮಾಡುತ್ತಿರುವಂಥದ್ದು ಅನ್ನುವ ನಿರ್ಧಾರಕ್ಕೆ ಯಾವ ಆಧಾರದ ಮೇಲೆ ಬಂದಿದ್ದಾರೆ? [ಈ ಪ್ರಶ್ನೆಯನ್ನು ತಮಿಳುನಾಡಿನ ಸಂದರ್ಭದಲ್ಲಿ ಜಯಲಲಿತಾರನ್ನೂ ಕೇಳಬೇಕು]. ಇವುಗಳನ್ನು ನೋಡಿದರೆ ಈ ಮಾತುಗಳೆಲ್ಲಾ ಯೋಚಿಸದೇ ಆಡಿದವು, ಅಥವಾ ಬೇರೊಬ್ಬರಿಂದ ಬಳುವಳಿಯಾಗಿ ಪಡೆದ, ಅಥವಾ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳು ಅಂತ ಅನ್ನಿಸುತ್ತದೆ. ಮೊದಲಿನಿಂದಲೂ ಕರ್ನಾಟಕ ಸರಕಾರ, ಮತ್ತು ಕರ್ನಾಟಕದಲ್ಲಿನ ರಾಜಕಾರಣಿಗಳು ನ್ಯಾಯಾಂಗ ಪ್ರಕ್ರಿಯೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ನ್ಯಾಯಾಂಗದಿಂದ ಉತ್ತಮ ಫಲಿತಾಂಶ ಬರಬಹುದೆಂಬ ನಂಬಿಕೆಯೂ ಅವರಿಗಿರಲಿಲ್ಲವಾದ್ದರಿಂದ, ಆದೇಶದಲ್ಲಿ "ಅನ್ಯಾಯ"ವನ್ನು ಅವರು ನಿರೀಕ್ಷಿಸಿದ್ದರು, ಮತ್ತು ತೀರ್ಪಿನಲ್ಲಿ ಅದೇ ಅವರಿಗೆ ಕಾಣಿಸುತ್ತಿದೆ. ತಮಿಳುನಾಡಿನ ಮಟ್ಟಿಗೆ ಹೇಳುವುದಾದರೆ ಕಾವೇರಿ ನೀರನ್ನು ತಮ್ಮ ರಾಜ್ಯವೇ ಹೆಚ್ಚಾಗಿ ಬಳಸುತ್ತಿದ್ದ ದಿನಗಳನ್ನು ಜನ ನೆನಪುಮಾಡಿಕೊಳ್ಳುತ್ತಾರೆ; ಆ ಮಟ್ಟಕ್ಕೆ ತೀರ್ಪು ಆ ರಾಜ್ಯದ ಪರವಾಗಿ ಇಲ್ಲವಾದ್ದರಿಂದ ಅವರಿಗೂ ಇದನ್ನು ಒಪ್ಪುವುದು ಕಷ್ಟವಾಗುತ್ತದೆ. ಎರಡೂ ರಾಜ್ಯಗಳು ತಮ್ಮ ಭೂತಕಾಲಗಳನ್ನು ಬಿಟ್ಟುಕೊಡದಿದ್ದಲ್ಲಿ ಈ ಬಗ್ಗೆ ಒಂದು ವಿವೇಚನಾಶೀಲ ನಿಲುವನ್ನು ತೆಗೆದುಕೊಳ್ಳುವ ಸಾಧ್ಯತೆ ಇಲ್ಲ.

ಪ್ರ ೬. ಈ ನಾಲ್ಕೂ ರಾಜ್ಯಗಳು ಆದೇಶದಿಂದ ಚಕಿತರಾಗುವುದಕ್ಕೆ ಕಾರಣವಿದೆಯೇ? 
ಉ. ಈ ಲೇಖಕನ ಉತ್ತರ ಈ ಪ್ರಶ್ನೆಗೆ "ಇಲ್ಲ" ಎನ್ನುವುದೇ ಆಗಿದೆ. ಈ ಲೇಖಕನ ಅಸಾಂಪ್ರದಾಯಿಕ ದೃಷ್ಟಿಯಲ್ಲಿ ಈ ಸಂಖ್ಯೆಗಳಲ್ಲಿ [ಅಂದರೆ ತಮಿಳುನಾಡಿಗೆ ೪೧೯ ಟಿಎಂಸಿ ಅಡಿ, ಕರ್ನಾಟಕಕ್ಕೆ ೨೭೦, ಕೇರಳಕ್ಕೆ ೩೦, ಪುದುಚ್ಚೇರಿಗೆ ೭] ನಿಜಕ್ಕೂ ಯಾವ ಅರ್ಥವೂ ಇಲ್ಲ. ಈ ಮಾತು ಆಶ್ಚರ್ಯಕರವಾಗಿರಬಹುದು, ಹೀಗಾಗಿ ಇದನ್ನು ವಿವರಿಸುವ ಅಗತ್ಯವಿದೆ.
 

ಮೊದಲಿಗೆ ನದೀಮೂಲದ ಕಡೆಗಿರುವ ರಾಜ್ಯಗಳಿಗೆ ನಿಗದಿಮಾಡಿರುವ ಸಂಖ್ಯೆಗಳು ಕಾಲ್ಪನಿಕವಾದದ್ದು. ಕೇರಳಕ್ಕೆ ಯಾರೂ ನೀರನ್ನು ಬಿಡುವುದಿಲ್ಲ: ಅದು ಆಕಾಶದಿಂದ ಸುರಿಯುತ್ತದೆ. [ಕೇರಳದಿಂದ "ಬಿಡುಗಡೆ" ಯಾಗದ ಆದರೆ ಕಬಿನಿ ನದಿಯ ಮೂಲಕ ಸಹಜವಾಗಿ ಹರಿಯುವ ನೀರನ್ನು ಬಿಟ್ಟರೆ], ಕರ್ನಾಟಕಕ್ಕೂ ಇದೇ ಮಾತು ವರ್ತಿಸುತ್ತದೆ. ಹಾಗೆಯೇ ತಮಿಳುನಾಡಿಗೆ ನಿಗದಿಮಾಡಿರುವ ಹೆಚ್ಚಿನಂಶ ನೀರು ಪ್ರಕೃತಿಯ "ದೇಣಿಗೆ". ಹೀಗಾಗಿ ನಮಗೆ ಮುಖ್ಯವಾಗುವ ಸಂಖ್ಯೆ ಅಂದರೆ ಕರ್ನಾಟಕ ತಮಿಳುನಾಡಿಗೆ "ಬಿಡ"ಬೇಕಾದ ನೀರು, ಮತ್ತು ತಮಿಳುನಾಡು ಕಾರೈಕಲ್‌ಗೆ [ಪುದುಚ್ಚೇರಿ] "ಬಿಡ"ಬೇಕಾದ ನೀರು. [ಗಮ್ಮತ್ತಿನ ಮಾತೆಂದರೆ ಸಹಜವಾಗಿ ಹರಿಯುತ್ತಿದ್ದ ನೀರನ್ನು ಮೊದಲಿಗೆ ಅಣೆಕಟ್ಟುಗಳ ಹಿಂದೆ ತಡೆಹಿಡಿಯುವುದರಿಂದ, ಈ ರಾಜ್ಯಗಳು ನೀರನ್ನು "ಬಿಡು"ವ ಅಥವಾ "ಕೊಡು"ವ ಹಕ್ಕನ್ನು ಕೈಗೂಡಿಸಿಕೊಂಡವು ಅನ್ನುವುದನ್ನು ನಾವು ಗಮನಿಸಬೇಕು.]
 

ಎರಡನೆಯದಾಗಿ ಕೇರಳ ರಾಜ್ಯ ೫ ಟಿಎಂಸಿ ಅಡಿ ನೀರನ್ನು ಮಾತ್ರ ಉಪಯೋಗಿಸುತ್ತಿದೆ ಎಂದು ೧೯೭೦ರಲ್ಲಿ ಅಂದಾಜು ಮಾಡಲಾಗಿತ್ತು. ಆಗಿನಿಂದ ನೀರಿನ ಉಪಯೋಗ ಹೆಚ್ಚಿರಬಹುದಾದರೂ ಅದಕ್ಕೆ ನಿಗದಿಮಾಡಿರುವ ೩೦ ಟಿಎಂಸಿ ಅಡಿ ನೀರನ್ನು ಆ ರಾಜ್ಯ ಉಪಯೋಗಿಸುವುದಕ್ಕೆ ಸಾಕಷ್ಟು ಕಾಲ ಹಿಡಿಯಲಿದೆ. ಹೀಗಾಗಿ ನಮಗೆ ಗೋಚರಿಸುವ ಭವಿಷ್ಯದಲ್ಲಿ ಕೇರಳ - ಮಿಕ್ಕ ರಾಜ್ಯಗಳ ಅವಶ್ಯಕತೆಗಳನ್ನು ಬಾಧಿಸದೇ ಹೇರಳವಾಗಿ ನೀರನ್ನು ಉಪಯೋಗಿಸಬಹುದೆಂದಾಯ್ತು. ೩೦ಟಿಎಂಸಿ ಅಡಿ ನೀರಿಗಿಂತ ಅಧಿಕವಾಗಿ ಬಳಸಬೇಕಾದ ಪರಿಸ್ಥಿತಿ ಮುಂದೆಂದಾದರೂ ಭವಿಷ್ಯದಲ್ಲಿ ಉಂಟಾದರೆ ಆಗ ಈ ಪರಿಮಿತಿಯನ್ನು ಪುನಹ ಪರಿಶೀಲಿಸಲು ಕಾವೇರಿ ನಿರ್ವಹಣಾ ಪ್ರಾಧಿಕಾರವನ್ನು ಅದು ಕೇಳಬಹುದು. ಅಥವಾ ಮತ್ತೂಂದು ಆಯೋಗವನ್ನು ರಚಿಸಲು ಮನವಿಮಾಡಿಕೊಳ್ಳಬಹುದು.
 

ಕರ್ನಾಟಕದ ಮಾತಿಗೆ ಬಂದರೆ ನಮಗೆ ಮುಖ್ಯವಾಗುವುದು ನಿಗದಿ ಮಾಡಿರುವ ೨೭೦ ಟಿಎಂಸಿ ಅಡಿ ನೀರಲ್ಲ. ಬದಲಿಗೆ ತಮಿಳುನಾಡಿಗೆ ಬಿಡಬೇಕಾದ ೧೯೨ ಟಿಎಂಸಿ ಅಡಿ ನೀರು. ಹೆಚ್ಚಿನ ವರ್ಷಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಸಹಜವಾಗಿ ಹರಿಯುವ ನೀರು ಇದಕ್ಕಿಂತ ಹೆಚ್ಚಾಗಿಯೇ ಇರುತ್ತದೆ. ಮಳೆ ಕಡಿಮೆ ಬಿದ್ದಾಗ ಮಾತ್ರ ಈ ಸಂಖ್ಯೆಯನ್ನು ನಿಭಾಯಿಸಲು ಕರ್ನಾಟಕಕ್ಕೆ ಕಷ್ಟವಾಗುತ್ತದೆ. ಅಂದರೆ, [ಈ ಮೊದಲು ಅಮಲಿಗೊಳಿಸುವುದಕ್ಕಷ್ಟೇ ಮಹತ್ವವೆಂದಿದ್ದ] ೧೯೨ ಟಿಎಂಸಿ ಅಡಿ ನೀರನ್ನು ಬಿಡುವುದು ಮಾಮೂಲು ವರ್ಷಗಳಲ್ಲಿ ಮಹತ್ವದ ಮಾತೇನೂ ಅಲ್ಲ. ಎಲ್ಲರನ್ನೂ ಕಾಡುತ್ತಿರುವ ಮಹತ್ವದ ಮಾತೆಂದರೆ, ಕೊರತೆಯ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳುವುದು ಹೇಗೆಂಬ ವಿಷಯಕ್ಕೆ ಸಂಬಂಧಿಸಿದ್ದು. ಇಲ್ಲಿ ಆಯೋಗ ಯಾವುದೇ ಸೂತ್ರವನ್ನು ನೀಡದೇ "ಪರಿಮಾಣಕ್ಕನುಸಾರವಾಗಿ" ಎಂದಷ್ಟೇ ಹೇಳಿ ವಿವರಗಳನ್ನು ಕಾವೇರಿ ನಿರ್ವಹಣಾ ಮಂಡಲಿಗೆ ಎಲ್ಲ ಕೆಲಸವನ್ನೂ ಬಿಟ್ಟುಕೊಟ್ಟಿದೆ.


ತಕ್ಷಣಕ್ಕೆ ಮಾಡಬೇಕಾದ ಕೆಲಸವೆಂದರೆ ಕೊರತೆಯಿರುವ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳುವ ವಿಧಾನದ ಬಗ್ಗೆ ಒಂದು ಒಪ್ಪಂದದ ಚೌಕಟ್ಟನ್ನು ಏರ್ಪಾಟು ಮಾಡಿಕೊಳ್ಳುವುದು. [ನಾವು ಚರ್ಚಿಸಿದ ಮೇಲಿನ ಅಂಕಿ-ಸಂಖ್ಯೆಗಳೆಲ್ಲಾ ಈ ಇಂಥ ಪರಿಸ್ಥಿತಿಯಗಳಲ್ಲಿ ಮಾತ್ರ ಅರ್ಥವನ್ನು ಪಡೆಯುತ್ತವೆ]. ಕಾವೇರಿ ನಿರ್ವಹಣಾ ಪ್ರಾಧಿಕಾರದ ರಚನೆಯಾದ ಕೂಡಲೇ ಅದು ಕೈಗೆತ್ತಿಕೊಳ್ಳಬೇಕಾದ ಮೊದಲ ಕೆಲಸ ಇದಾಗಬೇಕು. ನಾವು ಆಯೋಗದ ತೀರ್ಪಿನಲ್ಲಿ ತಪ್ಪು ಕಂಡುಹಿಡಿಯಲೇ ಬೇಕು ಅನ್ನುವುದಾದರೆ ಕೊರತೆಯ ವರ್ಷಗಳಲ್ಲಿ ನೀರನ್ನು ಹಂಚಿಕೊಳ್ಳಲು ಒಂದು ವಿವರವಾದ ತಾಂತ್ರಿಕ ಮತ್ತು ಅಮಲುಗೊಳಿಸಲಾಗುವಂತಹ ಸೂತ್ರವನ್ನು ಅದು ನೀಡಲಿಲ್ಲ ಅನ್ನುವ ಅಂಶದ ಮೇಲೆ ಟೀಕಿಸಬಹುದು. ಆದರೆ ಅದೂ ಒಳ್ಳೆಯದೇ ಆಗಿರಬಹುದು. ಸ್ಪಷ್ಟವಾಗಿ ಬದಲಾಯಿಸಲಾಗದ ಒಂದು ನ್ಯಾಯಾಂಗದ, ಅಮಲು ಪಡಿಸಲೇಬೇಕಾದ ತೀರ್ಮಾನಕ್ಕಿಂತ ಸಮಯಕ್ಕೆ ತಕ್ಕಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆಯಾ ರಾಜ್ಯಗಳ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡಬಹುದಾಗಿದೆ. 

ಈ ದೃಷ್ಟಿಯಿಂದ ನೋಡಿದರೆ ಕೋಪದ, ಹಲ್ಲು ಕಡಿಯುವ, ಎದೆ ಜಜ್ಜಿಕೊಳ್ಳುವ ಅವಶ್ಯಕತೆಯೇ ಇಲ್ಲ. ಈಗ ನಡೆಯುತ್ತಿರುವ ನಿರಶನ - ಸತ್ಯಾಗ್ರಹ ಎಲ್ಲವೂ ಅನವಶ್ಯಕ.


ಪ್ರ. ೭. ಕಡೆಗೆ ಈ ಬಿಕ್ಕಟ್ಟಿನ ಮೂಲ ಏನು? 
ಉ. ಪ್ರತಿ ರಾಜ್ಯವೂ ತನಗೆ ಬೇಕಾದ ನೀರಿನ ಪರಿಮಾಣವನ್ನು ನಮೂದಿಸಿವೆ. ಎಲ್ಲವನ್ನೂ ಕೂಡಿದರೆ ನದಿಯಲ್ಲಿರುವ ನೀರಿಗಿಂತ ಬೇಕೆನ್ನಲಾದ ನೀರಿನ ಪರಿಮಾಣ ಹೆಚ್ಚಾಗಿದೆ. ಹೀಗಾಗಿ ಈ ಬಿಕ್ಕಟ್ಟು. ಆದರೆ ಎಲ್ಲ ರಾಜ್ಯಗಳಿಗೂ ಇಷ್ಟು ನೀರು ಬೇಕೇ ಬೇಕೆ? ಭವಿಷ್ಯದ ಅಗತ್ಯಗಳನ್ನು ಈಗಿನ ಬಳಕೆಯ ಆಧಾರದ ಮೇಲೆ [ತುಸು ಪರಿಷ್ಕಾರಗಳೊಂದಿಗೆ] ಕಲ್ಪಿಸಲಾಗಿದೆ. ಆದರೆ ಬಹುಮಟ್ಟಿಗೆ ತಿಳಿದಿರುವ ವಿಷಯವೆಂದರೆ ಕೃಷಿ - ಮತ್ತು ಇತರ ಉಪಯೋಗಗಳಿಗೆ ಈಗಿನ ನೀರಿನ ಬಳಕೆಯ ವಿಧಾನ ಸಮರ್ಪಕವಾದದ್ದೂ ಅಲ್ಲ, ಗಿಟ್ಟುವ ಮಾತೂ ಅಲ್ಲ. ಈಗಿನ ನಮ್ಮ ವಿಧಾನದಲ್ಲಿ ಬಹಳಷ್ಟು ನೀರನ್ನು ನಾವು ಪೋಲು ಮಾಡುತ್ತಿದ್ದೇವೆ. ಈ ಬಗ್ಗೆ ಅನೇಕ ಬುದ್ಧಿಜೀವಿಗಳು, ಆಯೋಗಗಳೂ ಟಿಪ್ಪಣಿಗಳನ್ನು ಮಾಡಿವೆ. ನೀರನ್ನು ಸಮರ್ಪಕವಾಗಿ ಉಪಯೋಗಿಸಬೇಕೆನ್ನುವ ವಿವೇಕ ನಮಗೆ ಬರದೇ ಇದ್ದಲ್ಲಿ, ಈ ಬಿಕ್ಕಟ್ಟುಗಳನ್ನು ತಡೆಗಟ್ಟುವ ಅಥವಾ ಪರಿಹರಿಸುವ ಯಾವುದೇ ಆಶಾಭಾವವನ್ನು ನಾವು ಹೊಂದಲು ಸಾಧ್ಯವೇ ಇಲ್ಲ.

Sunday, March 8, 2009

ನಾವೇಕೆ ಬ್ಲಾಗ್ ಮಾಡುತ್ತೇವೆ!



ನನ್ನ ಸಂದರ್ಶನ

ನಿಮಗೆ ಬ್ಲಾಗ್ ಬರೆಯುವ ಐಡಿಯಾ ಬಂದದ್ದು ಹೇಗೆ?
ನನಗೆ ಬ್ಲಾಗ್ ಬರೆಯುವ ಐಡಿಯಾ ನನ್ನ ವಿದ್ಯಾರ್ಥಿಗಳಿಂದ ಬಂತು. ಅಂತರ್ಜಾಲದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಬರೆಯುವುದನ್ನ, ಮುಖ್ಯವಾಗಿ ನನ್ನದೇ ಪಾಠಗಳ ಬಗ್ಗೆ ಬೆರೆಯುವುದನ್ನ ಕಂಡಾಗ ನನಗೆ ಅದರ ಅದ್ಭುತ ಸಾಧ್ಯತೆ ಗೋಚರವಾಯಿತು. ಸಾಲದ್ದಕ್ಕೆ ನಾನು ಒಂದೆರಡು ವರ್ಷಗಳಿಂದ ಕನ್ನಡದಲ್ಲಿ ಬರವಣಿಗೆಯನ್ನು ನಿಲ್ಲಿಸಿಬಿಟ್ಟಿದ್ದೆ.ಇದಕ್ಕೆ ಕಾರಣ ನನ್ನ ಇಂಗ್ಲೀಷ್ ಬರಹವನ್ನು ಕಂಪ್ಯೂಟರ್ನಲ್ಲಿ ಬರೆಯುತ್ತಿದ್ದುದರಿಂದ ಕಾಗದದ ಮೇಲೆ ಕೈನಲ್ಲಿ ಬರೆಯುವ ಅಭ್ಯಾಸ ತಪ್ಪಿಹೋಗಿತ್ತು. ಕನ್ನಡದಲ್ಲಿ ನಾನು ಐ-ಲೀಪ್ ಉಪಯೋಗಿಸುತ್ತಿದ್ದೆ. ಅದನ್ನ ಪ್ರತಿಬಾರಿ ಉಪಯೋಗಿಸುವಾಗಲೂ ಅದರ ಸಿ.ಡಿಯನ್ನು ಕಂಪ್ಯೂಟರ್ನಲ್ಲಿ ತೂರಿಸಿಬೇಕಾಗುತ್ತಿತ್ತು.. ಹೀಗಾಗಿ ಕನ್ನಡದ ನನ್ನ ಬರವಣಿಗೆ ನಿಂತೇ ಹೋಗಿತ್ತು. ಬ್ಲಾಗ್ ಮಾಧ್ಯಮವನ್ನು ನಾನು ಕಂಡುಕೊಂಡಾಗ ನನಗೆ ಮತ್ತೆ ಅಕ್ಷರಲೋಕಕ್ಕೆ ಕಾಲಿಡುವ ಸಾಧ್ಯತೆ ಕಾಣಿಸಿತು. ಜೊತೆಗೆ ಇದು ಹೊಸ ಮಾಧ್ಯಮವಾದ್ದರಿಂದ ಇದರಲ್ಲಿ ಪ್ರಯೋಗ ಮಾಡುವುದರಲ್ಲಿ ಒಂದು ಬಗೆಯ ಥ್ರಿಲ್ ಇತ್ತು.


ನೀವು ಬ್ಲಾಗ್ ಬರೆಯುವುದು ಏಕೆ?
ನಾನು ಮೂಲತಃ ಬರಹಗಾರ. ನನಗೆ ಬರವಣಿಗೆಯ ಮಾಧ್ಯಮಗಳಲ್ಲಿ ಪ್ರಯೋಗ ಮಾಡಬೇಕೆನ್ನಿಸುವುದು ಸಹಜ. ಕಥೆ, ಕಾದಂಬರಿ, ಕವಿತೆ, ಪ್ರಬಂಧಗಳ ಪ್ರಕಾರಗಳ ಪ್ರಾಕಾರಗಳನ್ನು ಮಿತಿಗಳನ್ನು ಮೀರಲು ಬ್ಲಾಗ್ ನನಗೆ ಸಹಾಯ ಮಾಡಿದೆ.

ಬ್ಲಾಗ್ ಬರೆಯುತ್ತಾ ಬರೆಯುತ್ತಾ ನಿಮಗೆ ಏನು ಸಿಕ್ಕಿದೆ?
ನನಗೆ ಸಿಕ್ಕಿದ್ದು ಸಫಲತೆ, ಸಂತೋಷ.. ಇದೇ ಸಮಯದಲ್ಲಿ ಒಂದು ಪತ್ರಿಕೆ ನನ್ನನ್ನು ಒಂದು ಕಾಲಂ ಬರೆಯಲು ಕೇಳಿದರು. ಆದರೆ ನನ್ನ ನೌಕರಿಯ ಮಿತಿಯಲ್ಲಿ, ನನಗೆ ಇರುವ ಓಡಾಟದ ಒತ್ತಡದಲ್ಲಿ, ಕನ್ನಡನಾಡಿನಿಂದ ದೂರವಿರುವುದರಿಂದ ಕನ್ನಡದ ಸಂದರ್ಭಕ್ಕೆ ಸಮರ್ಪಕವೆನ್ನಿಸುವ ರೀತಿಯಲ್ಲಿ ಕಾಲಂ ಬರೆಯಲು ಸಾಧ್ಯವಿಲ್ಲವೆಂದು ನನಗೆ ಮನದಟ್ಟಾಯಿತು. ಜೊತೆಗೆ ಪತ್ರಿಕೆಗಳಲ್ಲಿ ಬರೆಯುವಾಗ ಇರುವ ಪದಮಿತಿಯ ಬಂಧನವೂ ನನ್ನ ಮನಸ್ಸಿನಲ್ಲಿತ್ತು. ಆಗ ನನಗೆ ಬ್ಲಾಗಿನಲ್ಲಿ ಅತ್ಯಂತ ಅದ್ಭುತವಾದ ಮಾಧ್ಯಮ ದೊರೆಯಿತು, ಯಾಕೆಂದರೆ ಇದು ಒಂದು ರೀತಿಯಲ್ಲಿ ಅನಿಯತಕಾಲಿಕವಾಗ ಬಹುದು, ಪದಮಿತಿಯಿಲ್ಲಿದೇ ಬರೆಯಬಹುದು, ಇದಕ್ಕೆ ಬೇಕಾದ ಚಿತ್ರಗಳನ್ನು, ಇದರ ವಿನ್ಯಾಸವನ್ನೂ ನಾನೇ ರೂಪಿಸಬಹುದಿತ್ತು. ಆಸಕ್ತಿ ಹುಟ್ಟಿಸುವ ಲೇಖನಗಳಿಗ ಕೊಂಡಿಯನ್ನೂ ಕೊಡಲು ಸಾಧ್ಯವಿತ್ತು.. ಜೊತೆಗೆ ಇಲ್ಲಿಯೂ ಸಲ್ಲದ ಅಲ್ಲಿಯೂ ಸಲ್ಲದ ಲೇಖನಗಳನ್ನು ನಾನು ಬರೆಯಲು ಸಾಧ್ಯವಾಯಿತು.. ನನ್ನ ಬರಹದಲ್ಲಿ ಕೆಲ ಲೇಖನಗಳನ್ನು ದಿನ/ವಾರ ಪತ್ರಿಕೆಗಳು ಪ್ರಕಟಿಸಲು ಇಷ್ಟಪಡುವಂಥವುದಲ್ಲ. ಸಾಹಿತ್ಯಿಕ ಪತ್ರಿಕೆಗಳು ಇರುವುದು ಬೆರಳೆಣಿಕೆಯಷ್ಟು.. ಅವೂ ಅನಿಯತಕಾಲಿಕಗಳಾದ್ದರಿಂದ ಯಾವಾಗ ಪ್ರಕಟಗೊಳ್ಳುವುದೋ ತಿಳಿಯದು.. ಹೀಗಾಗಿ ಈ ಮಾಧ್ಯಮ ನನಗೆ ಹಿಡಿಸಿತು. ನಾನು ಕನ್ನಡದಲ್ಲಲ್ಲದೇ ಇಂಗ್ಲೀಷಿನಲ್ಲೂ ಒಂದು ಬ್ಲಾಗ್ ಪ್ರಾರಂಭಿಸಿದೆ. ಕೆಲ ಲೇಖನಗಳು ಎರಡು ಭಾಷೆಗಳಲ್ಲೂ ಹಚ್ಚಿರುವೆನಾದರೂ, ಕೆಲವು ಆಯಾ ಭಾಷೆಯ ಸಂದರ್ಭಕ್ಕೆ ಒಗ್ಗುವವು ಅನ್ನಿಸಿದೆ..

ಓದುಗರ ಸ್ಪಂದನ ಹೇಗಿದೆ?
ಚೆನ್ನಗಿದೆ, ಆದರೆ ಸಾಲದು. ಬ್ಲಾಗಿನ ಅದ್ಭುತವೆಂದರೆ ಒಂದು ಚರ್ಚೆ ಸಂಭಾಷಣೆ ನಡೆಸಲು ಸಾಧ್ಯ. ಆದರೆ ನನ್ನ ಬ್ಲಾಗಿಗೆ ಮೊದಲು ಬಂದಷ್ಟು ಪ್ರತಿಕ್ರಿಯಗಳು ಈಗೀಗ ಬರುತ್ತಿಲ್ಲ. ಅದಕ್ಕೆ ಕಾರಣ ಬಹುಶಃ ಅಲ್ಲಿನ ಲೇಖನಗಳು ತುಸು ಗಂಭೀರವಾಗಿರುವುದೇ ಆಗಿರಬಹುದು. ಸಾಮಾನ್ಯವಾಗಿ ಈ ಮಾಧ್ಯಮವನ್ನು ಉಪಯೋಗಿಸುವವರು, ಇದನ್ನ ಒಂದು ದಿನಚರಿಯ ಪುಟದಂತೆ, ಲೈಟಾಗಿ ಉಪಯೋಗಿಸುತ್ತಾರೆ. ಉದಾಹರಣೆಗ ಸೌರವ್ ಗಂಗೂಲಿಯ ಕಪ್ತಾನಿಯ ಬಗ್ಗೆ ಬರೆದರೆ, ಅದಕ್ಕೆ ಬಹುಶಃ ಹೆಚ್ಚು ಪ್ರತಿಕ್ರಿಯೆ ಬರಬಹುದು.. ಆದರೆ ನಾನು ಬ್ಲಾಗಿನ ಮಾಧ್ಯಮವನ್ನು ಉಪಯೋಗಿಸುತ್ತಿರುವುದು ತುಸು ಭಿನ್ನ ರೀತಿಯಲ್ಲಿ ಹೀಗಾಗಿ ನನ್ನ ಆಶಯದಷ್ಟು ಪ್ರತಿಕ್ರಿಯೆ ಬರುತ್ತಿಲ್ಲವೆಂಬ ನನ್ನ ಅಸಮಾಧಾನ ಸಹಜವೇ.. ಆಸೆಗೂ ಮಿತಿಯಿರಬೇಕು!!


ದೇಸೀ ಭಾಷೆಯೊಂದನ್ನು ಬೆಚ್ಚಗಿಡುವಲ್ಲಿ ಬ್ಲಾಗ್ ಪಾತ್ರ ಏನು?
ನನಗೆ ಬ್ಲಾಗ್ ಈ ಥರದ ಮಹತ್ತರ ಸಾಧನೆ ಮಾಡುತ್ತದೆ ಅನ್ನಿಸುವುದಿಲ್ಲ.. ಆಯಾ ಭಾಷೆಗೆ ಇರುವ ಅನೇಕ ಪರಿಕರಗಳಲ್ಲಿ ಇದೂ ಒಂದು ಅಂತ ಅನ್ನಿಸುತ್ತದೆ. ಆದರೆ ಕನ್ನಡದಲ್ಲಿ ಬ್ಲಾಗ್ ಮಾಡುವಾಗ ನಮಗಿರುವ ಪರಿಕರಗಳು ಕಡಿಮೆ. ಉದಾಹರಣೆಗೆ ವಿನ್ಯಾಸಕ್ಕಿರುವ ಪರಿಕರ "ಟೆಂಪ್ಲೇಟ್" ಇಂಗ್ಲೀಶ್ ಭಾಷೆಗೆ ಅನುಗುಣವಾಗಿ ಇದೆ. ಹೆಚ್ಟಿ‌ಎಂಎಲ್ ಜಾವಾ ತಿಳಿಯದ ನನ್ನಂಥವರಿಗೆ ಅದನ್ನು ಕನ್ನಡಿಸುವ ಕೆಲಸ ಕಷ್ಟದ್ದು. ಆದರೂ ನಾನು ಸಾಧ್ಯವಾದಷ್ಟು ಅದರವಿನ್ಯಾಸವನ್ನು ಕನ್ನಡಿಸಿದ್ದೇನೆ.. ಆದರೂ ತಾರೀಖು, ತಿಂಗಳುಗಳ ಹೆಸರುಗಳು ಇನ್ನೂ ಇಂಗ್ಲೀಷಿನಲ್ಲೇ ಇವೆ.. ಈ ಮಾಧ್ಯಮದಲ್ಲಿ ಕನ್ನಡದ ಪರಿಕರಗಳನ್ನು ಹುಟ್ಟಿಸುವ ಕೆಲಸ ಆಗಬೇಕಾಗಿದೆ. ಸಧ್ಯಕ್ಕೆ ಕೈಬೆರೆಳೆಣಿಕೆಯಷ್ಟು ಜನ ಬ್ಲಾಗ್ ಬರೆಯುತ್ತಿದ್ದಾರೆ.

ನಿಮ್ಮ ಮೆಚ್ಚಿನ ಬ್ಲಾಗ್‌ಗಳು ಯಾವುವು?
ಮಜಾವಾಣಿ [majavani.blogspot.com] ಎಂಬ ಫೇಕ್ ಪತ್ರಿಕೆಯನ್ನು ವಾರ್ತಾವಿದೂಷಕ ಎಂಬವರು ನಡೆಸುತ್ತಿದ್ದಾರೆ.. ಅತ್ಯುತ್ತಮ ಹಾಸ್ಯಕ್ಕೆ ನಾನು ಆ ಬ್ಲಾಗನ್ನು ಓದುತ್ತೇನೆ. ಓ.ಎಲ್.ನಾಗಭೂಷಣಸ್ವಾಮಿ ತಮ್ಮ ಬ್ಲಾಗನ್ನು "ಸಂಪದ" ಎಂಬ ಸಮೂಹದಲ್ಲಿ ಬರೆಯುತ್ತಾರೆ [sampada.net]. ಅದೂ ನನಗೆ ಮೆಚ್ಚುಗೆಯೇ.. ಇಂಗ್ಲೀಷಿನಲ್ಲಿ ಉಮಾ ದಾಸ್ಗುಪ್ತಾ ಬರೆಯುವ ಬ್ಲಾಗೂ ನನಗೆ ಇಷ್ಟ [indianwriting.blogspot.com]. ನನಗೆ ಇಷ್ಟವಾದ ಅಂತರ್ಜಾಲದ ಪುಟಗಳ ಕೊಂಡಿಗಳನ್ನು ನನ್ನ ಬ್ಲಾಗಿನಲ್ಲೇ ಕೊಟ್ಟಿದ್ದೇನೆ.